ಕೊಳಕ, ರಣಹೇಡಿ; ಡಿಕೆ ಶಿವಕುಮಾರ್-ಯೋಗೀಶ್ವರ್ ವಾಕ್ಸಮರ

ಶುಕ್ರವಾರ, 24 ಫೆಬ್ರವರಿ 2012 (10:41 IST)
PR
ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ.ಯೋಗೀಶ್ವರ್ ಅವರನ್ನು ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ರಣಹೇಡಿ ಎಂದು ವಾಗ್ದಾಳಿ ನಡೆಸಿದ್ದರೆ, ಡಿಕೆ ಶಿವಕುಮಾರ್ ಅವರನ್ನು ಕೊಳಕ ಎಂದು ಯೋಗೀಶ್ವರ್ ನಿಂದಿಸಿರುವ ಘಟನೆ ಗುರುವಾರ ನಡೆದಿದೆ.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಕೆಡಿಪಿ ಸಭೆ ಕರೆಯಲಾಗಿತ್ತು. ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಸಭೆಯನ್ನು ತಾತ್ಕಾಲಿಕ ಮುಂದೂಡಿದರು. ಇದನ್ನು ಡಿಕೆಶಿ ಕಟುವಾಗಿ ಟೀಕಿಸಿದರು. ಜಿಲ್ಲೆಯಲ್ಲಿ ಆಡಳಿತ ಕುಸಿದು ಬಿದ್ದಿದ್ದು, ಅವ್ಯವಸ್ಥೆ ಅಕ್ರಮದ ಸಾಮ್ರಾಜ್ಯ ಮೆರೆಯುತ್ತಿದೆ ಎಂದು ಆರೋಪಿಸಿದರು.

ಆಗ ಮಧ್ಯಪ್ರವೇಶಿಸಿದ ಸಚಿವ ಯೋಗೀಶ್ವರ್, ಭಾಷಣ ಬೇಡ, ಅಜೆಂಡ ಪ್ರಕಾರ ಮಾತನಾಡಿ ಎಂದರು. ಇದರಿಂದ ಕೋಪಗೊಂಡ ಡಿಕೆಶಿ, ಮತಾಡೋಕೆ ಕಣಯ್ಯ ಬಂದಿರೋದು ಎಂದು ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ಸಭೆಯನ್ನು ಮೊಟಕುಗೊಳಿಸಿ ಸಚಿವ ಯೋಗೀಶ್ವರ್ ನಿರ್ಗಮಿಸುತ್ತಿದ್ದಂತೆಯೇ, ಸಭೆ ಮುಂದುವರಿದರೆ ದಂಧೆಗಳು ಒಂದೊಂದೇ ಬಿಚ್ಚಿಕೊಳ್ಳುತ್ತವೆ ಎಂದು ರಣಹೇಡಿಯಂತೆ ಸ್ಥಳದಿಂದ ಓಡಿಹೋಗುತ್ತಿದ್ದಾರೆ ಎಂದು ಕೆಣಕಿದರು.

ಈ ಬಗ್ಗೆ ಜಿಲ್ಲಾ ಪಂಚಾಯ್ತಿ ಹೊರಗೆ ಸುದ್ದಿಗಾರರ ಜತೆ ಮಾತನಾಡಿದ ಯೋಗೀಶ್ವರ್, ಸಭೆಯನ್ನು ತಾತ್ಕಾಲಿಕಾಗಿ ಮುಂದೂಡಿದ್ದೇವೆ. ರಣಹೇಡಿಯಂತೆ ಓಡಿ ಬಂದಿಲ್ಲ. ಇದಕ್ಕೆಲ್ಲಾ ಬಣ್ಣಕಟ್ಟಿ ಹೇಳುವ ಕೊಳಕು ವ್ಯಕ್ತಿತ್ವದ ಡಿಕೆಶಿ ಆರೋಪಗಳಿಗೆ ಪ್ರತಿಕ್ರಿಯಿಸಲಾರೆ ಎಂದರು.

ವೆಬ್ದುನಿಯಾವನ್ನು ಓದಿ