ಕೋಲಾರದ ಬೆಟ್ಟದಲ್ಲಿ ಚಿರತೆಗಳ ಹಿಂಡು : ಆತಂಕದಲ್ಲಿ ಜನತೆ

ಸೋಮವಾರ, 28 ಅಕ್ಟೋಬರ್ 2013 (13:21 IST)
PR
PR
ಇಲ್ಲಿನ ಕೆಲವು ಗುಡ್ಡಗಾಡು ಪ್ರದೇಶಗಳಲ್ಲಿ ಚಿರತೆಗಳು ರಾಜಾರೋಷವಾಗಿ ಅಡ್ಡಾಡುತ್ತಿವೆ. ರಾತ್ರಿಯ ವೇಳೆಯಲ್ಲಿ ಊರುಗಳಿಗೆ ನುಗ್ಗುತ್ತಿವೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರೂ, ಇನ್ನು ಯಾವುದೇ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿಲ್ಲ. ಹೀಗಾಗಿ ಸ್ಥಳೀಯರು ಅರಣ್ಯ ಇಲಾಖೆಯ ವಿರುದ್ಧ ಅಸಮಾಧಾನಗೊಂಡಿದ್ದು, ಜೀವವನ್ನು ಬಿಗಿ ಹಿಡಿದು ಬದುಕುತ್ತಿದ್ದಾರೆ.

ಕೋಲಾರದ ಬಳಿ ಇರುವ ಧನಮಟ್ನಹಳ್ಳಿ ಬಳಿ 6 ಚಿರತೆಗಳು ಇವೆ ಎಂದು ಹೇಳಲಾಗುತ್ತಿದೆ. ಈ ಚಿರತೆಗಳು ಇಲ್ಲಿನ ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ಕಳೆದ ಹಲವು ದಿನಗಳಿಂದ ಬೀಡು ಬಿಟ್ಟಿವೆ. ಮಾಧ್ಯಮದ ಕ್ಯಾಮೆರಾ ಕಣ್ಣಿಗೂ ಈ ಚಿರತೆಗಳು ಬಿದ್ದಿದ್ದು, ಆರಾಮಾಗಿ ವಿರಮಿಸುತ್ತಿವೆ. ಆದ್ರೆ ಹಗಲಲ್ಲಿ ಬೆಟ್ಟ ಗುಡ್ಡಗಳಲ್ಲಿ ಕಾಣಿಸುವ ಈ ಚಿರತೆಗಳ ಹಿಂಡು ರಾತ್ರಿಯಾಗುತ್ತಿದ್ದಂತೆ ಊರುಗಳಿಗೆ ನುಗ್ಗುತ್ತವೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ರಾತ್ರಿಯ ವೇಳೆಯಲ್ಲಿ ಊರಿನ ಬೀದಿಗಳಲ್ಲಿ ರಾಜಾರೋಷವಾಗಿ ಚಿರತೆಗಳು ಅಡ್ಡಾಡುತ್ತಿರುವುದನ್ನು ಸ್ಥಳೀಯರು ಕೂಡ ಗಮನಿಸಿದ್ದಾರೆ. ಹೀಗಾಗಿ ಚಿರತೆ ತಮ್ಮ ಮೇಲೆ ದಾಳಿ ನಡೆಸಬಹುದು ಎಂದು ಭಯಭೀತಗೊಂಡಿದ್ದಾರೆ. ಪ್ರತಿ ದಿನವೂ ಜೀವ ಬಿಗಿ ಹಿಡಿದುಕೊಂಡು ಬದುಕುವಂತಾಗಿದೆ.

ಆದಷ್ಟು ಬೇಗ ಅರಣ್ಯ ಇಲಾಖೆಯ ಸಿಬ್ಬಂಧಿಗಳು ಗ್ರಾಮದ ಬೆಟ್ಟಗಳಲ್ಲಿ ಬೀಡು ಬಿಟ್ಟಿರುವ ಚಿರತೆಗಳನ್ನು ಹಿಡಿದು ಬೇರೆಡೆಗೆ ಒಯ್ಯಬೇಕು. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ