ಗಾಂಧಿ ಬಲಿದಾನ ದಿನ ಬಿಜೆಪಿ ಸಮಾರಂಭ ಸರಿಯೇ?: ಡಿಕೆಶಿ

ಭಾನುವಾರ, 31 ಜನವರಿ 2010 (10:16 IST)
NRB
ಮಹಾತ್ಮಗಾಂಧಿ ಅವರು ಬಲಿದಾನ ಮಾಡಿದ ಹುತಾತ್ಮರ ದಿನಾಚರಣೆ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿರುವುದು ರಾಜ್ಯಕ್ಷಷ್ಟೇ ಅಲ್ಲ, ದೇಶಕ್ಕೆ ಮಾಡಿದ ಅಪಮಾನ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.

ಮಹಾತ್ಮಗಾಂಧಿ ಕಗ್ಗೊಲೆಯಾದ ದಿನವಾಗಿರುವ ಇಂದು(ಶುಕ್ರವಾರ) ದೇಶವಲ್ಲದೆ ಇಡೀ ವಿಶ್ವವೇ ಹುತಾತ್ಮ ದಿನಾಚರಣೆ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷರಿಗೆ ಅಭಿನಂದನೆಯ ಅದ್ದೂರಿ ಸಮಾರಂಭ ಏರ್ಪಡಿಸಿ ಹಬ್ಬದ ವಾತಾವರಣ ನಿರ್ಮಾಣ ಮಾಡಿರುವುದು ಸರಿಯಲ್ಲ ಎಂದರು.

ನೋವಿನ ದಿನದ ವೇಳೆ ಹಬ್ಬದ ವಾತಾವರಣ ನಿರ್ಮಿಸಿ ಮಹಾತ್ಮನಿಗೆ ಅಗೌರವ ತೋರಿರುವ ಬಿಜೆಪಿ ಮುಖಂಡರು ನಾಡಿನ,ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದರು.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಸರಳತೆ, ಸಮಾನತೆ, ಶಾಂತಿ ಸಹಬಾಳ್ವೆಯ ಸಂದೇಶ ಸಾರಿದ ಗಾಂಧಿ ಅವರ ಬಗ್ಗೆ ಬಿಜೆಪಿಯವರಿಗೆ ಕಿಂಚಿತ್ತಾದರೂ ಗೌರವವಿದ್ದರೆ, ಇಂತಹ ಅದ್ದೂರಿ ಸಮಾರಂಭ ಏರ್ಪಡಿಸುತ್ತಿರಲಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ವೆಬ್ದುನಿಯಾವನ್ನು ಓದಿ