ಕಾಂಗ್ರೆಸ್ ಟಿಕೇಟ್ ಹಂಚಿಕೆ ವೇಳೆ ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಗಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ, ಚಿತ್ರನಟ ಅಂಬರೀಷ್ ಭಾರೀ ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ರವೀಂದ್ರ ಶ್ರೀಕಂಠಯ್ಯಗೆ ಕಾಂಗ್ರೆಸ್ ಟಿಕೇಟ್ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ರವೀಂದ್ರ ಶ್ರೀಕಂಠಯ್ಯಗೆ ಟಿಕೇಟ್ ನೀಡಿದರೆ ತಾವು ಮಂಡ್ಯದಿಂದ ಸ್ಪರ್ಧಿಸುವುದಿಲ್ಲ ಎಂದು ಅಂಬರೀಷ್ ರೊಚ್ಚೆ ಹಿಡಿದಿದ್ದರು.
ಅಂಬರೀಷ್ ಅವರ ಒತ್ತಡಕ್ಕೆ ಮಣಿದು ಶ್ರೀರಂಗಪಟ್ಟಣದಲ್ಲಿ ರವೀಂದ್ರ ಶ್ರೀಕಂಠಯ್ಯಗೆ ನೀಡಿದ್ದ ಟಿಕೇಟನ್ನು ಹಿಂಪಡೆದಿದ್ದ ಕಾಂಗ್ರೆಸ್ ಹೈಕಮಾಂಡ್ ಅಂಬರೀಷ್ ಬೆಂಬಲಿಗ ಸಿದ್ದರಾಜುವಿಗೆ ನೀಡಿತ್ತು.
ಇದರಿಂದ ಮಂಡ್ಯದಲ್ಲಿ ಅಂಬರೀಷ್ ಅವರ ಸ್ಪರ್ಧೆಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿತ್ತಲ್ಲದೆ, ಚುನಾವಣಾ ಪ್ರಚಾರಕ್ಕೂ ಅಸಹಕಾರ ತೋರಿಸಿದ್ದರ ನಡುವೆ ಅಂಬರೀಷ್ ಗೆಲುವು ಸಾಧಿಸಿ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ.