ಡೀವಿಗೆ ಜೆಡಿಎಸ್ ಅನ್ನು ಅಡವಿಡೋಲ್ಲ: ಎಚ್.ಡಿ.ಕುಮಾರಸ್ವಾಮಿ

ಶುಕ್ರವಾರ, 6 ಏಪ್ರಿಲ್ 2012 (12:20 IST)
PR
ಜೆಡಿಎಸ್ ಪಕ್ಷ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಕೈಜೋಡಿಸಿಲ್ಲ. ನಾವು ಜೆಡಿಎಸ್ ಅನ್ನು ಸದಾನಂದ ಗೌಡರಿಗೆ ಅಡವಿಡೋಲ್ಲ...ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಡಿಯೂರಪ್ಪ ಮತ್ತು ಕಾಂಗ್ರೆಸ್ ಮುಖಂಡ ವಿಶ್ವನಾಥ್‌ಗೆ ತಿರುಗೇಟು ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕಾಂಗ್ರೆಸ್ ಮುಖಂಡ ವಿಶ್ವನಾಥ್ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದ ಅವರು, ಕೆಲವು ನಾಯಕರು ಜೆಡಿಎಸ್ ಸದಾನಂದ ಗೌಡರ ಜತೆ ಕೈಜೋಡಿಸಿದೆ. ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರ ನಡೆಯುತ್ತಿದೆ ಎಂದು ಆರೋಪಿಸುತ್ತಿದ್ದಾರೆ ಎಂದರು.

ಜೆಡಿಎಸ್ ರಾಜ್ಯ ಪರಿಶಿಷ್ಟ ಜಾತಿ ವಿಭಾಗ ಜೆಡಿಎಸ್ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಮಾತನಾಡಿದರು.

ನಾನು ಯಾರ ಪರವಾಗಿಯೂ ಮಾತನಾಡುತ್ತಿಲ್ಲ. ಜೆಡಿಎಸ್ ಸದಾನಂದ ಗೌಡರ ಜತೆ ಕೈಜೋಡಿಸಿಲ್ಲ ಎಂದ ಅವರು, ಮುಖ್ಯಮಂತ್ರಿಗಳಿಗೆ ಮೂರು ತಿಂಗಳ ಹಿಂದೆಯೇ ಸಲಹೆ ನೀಡಿದ್ದೆ. ಬೆಂಗಳೂರಿನಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್ ಮಾಡಿದರೆ ಜಿಲ್ಲಾಧಿಕಾರಿಗಳ ಮುಖ ಕಾಣುತ್ತದೆಯೇ ಹೊರತು, ಸಮಸ್ಯೆಗಳಿಂದ ಬಳಲುವ ಜನಸಾಮಾನ್ಯರ ಮುಖ ಕಾಣುವುದಿಲ್ಲ ಎಂದು ತಿಳಿಸಿದ್ದೆ.

ಮಂತ್ರಿಗಳು ರೆಸಾರ್ಟ್‌, ದೆಹಲಿಗೆ ತಿರುಗುವುದನ್ನು ಬಿಟ್ಟು ತಮ್ಮ, ತಮ್ಮ ಜಿಲ್ಲೆಗಳಿಗೆ ಹೋಗಿ ಪರಿಸ್ಥಿತಿ ನಿಭಾಯಿಸಬೇಕು. ಸದಾನಂದ ಗೌಡರು ಕೂಡ ಮಲ್ಲೇಶ್ವರದಲ್ಲಿನ ದೇವರ ಬಳಿ ತಿರುಗುವುದನ್ನು ನಿಲ್ಲಿಸಿ, ಮತ ನೀಡಿದ ದೇವರುಗಳ ಸೇವೆ ಮಾಡಬೇಕು. ಸಚಿವರುಗಳು ಗ್ರಾಮಾಂತರ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿ ಜನರ ಕುಂದು ಕೊರತೆಗಳನ್ನು ಆಲಿಸಬೇಕು ಎಂದರು.

ವೆಬ್ದುನಿಯಾವನ್ನು ಓದಿ