ತಾಳಕ್ಕೆ ತಕ್ಕಂತೆ ಕುಣಿಯದ ಜೈಲು ಅಧೀಕ್ಷಕ ಲಕ್ಷ್ಮೀನಾರಾಯಣ ಎತ್ತಂಗಡಿ?

ಸೋಮವಾರ, 31 ಅಕ್ಟೋಬರ್ 2011 (10:01 IST)
ಘಟಾನುಘಟಿ ಕೈದಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿಲ್ಲ ಎಂಬ ಅಸಮಾಧಾನದಿಂದ ಇದೀಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಟಿ.ಎಸ್.ಲಕ್ಷ್ಮೀನಾರಾಯಣ ಅವರ ಎತ್ತಂಗಡಿಗೆ ಸರ್ಕಾರ ಸಿದ್ದತೆ ನಡೆಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ[

14 ತಿಂಗಳ ಸೇವಾವಧಿ ಇರುವ ಲಕ್ಷ್ಮೀನಾರಾಯಣ ಅವರನ್ನು ಬಳ್ಳಾರಿಗೆ ವರ್ಗಾಯಿಸಲು ಸಚಿವರ ಮಟ್ಟದಲ್ಲಿ ಮಾತುಕತೆ ನಡೆದಿದೆ. ವಿಐಪಿ ಕೈದಿಗಳ ಮೂಗಿನ ನೇರಕ್ಕೆ ನಡೆದುಕೊಳ್ಳುತ್ತಿಲ್ಲ ಎಂಬುದೇ ಪ್ರಮುಖ ಕಾರಣ. ಯಾವುದೇ ಕಪ್ಪು ಚುಕ್ಕಿ ಇಲ್ಲದ ಲಕ್ಷ್ಮೀನಾರಾಯಣರನ್ನು ಉಳಿಸಿಕೊಳ್ಳಲು ಗೃಹ ಇಲಾಖೆಯ ಕಾರ್ಯದರ್ಶಿ ಜಾಮ್‌ದಾರ್ ಮತ್ತು ಎಡಿಜಿಪಿ ಗಗನ್ ದೀಪ್ ಪ್ರಯತ್ನ ನಡೆಸುತ್ತಿದ್ದಾರೆ.

ಜೈಲು ಅಧೀಕ್ಷಕ ಲಿಂಗರಾಜು ಶೀಘ್ರದಲ್ಲೇ ಬಡ್ತಿ ಹೊಂದಲಿದ್ದು, ಅವರಿಗೆ ತಾತ್ಕಾಲಿಕವಾಗಿ ಹೊಣೆ ವಹಿಸುವ ಚಿಂತನೆ ನಡೆದಿದೆ. ಕೈದಿಗಳಿಗೆ ತ್ವರಿತ ಪೆರೋಲ್ ನೀಡಿದ ಆರೋಪ ಎದುರಿಸುತ್ತಿರುವ ಗುಲ್ಬರ್ಗ ಜೈಲಿನ ಅಧೀಕ್ಷಕ ಕೃಷ್ಣ ಕುಮಾರ್ ಅವರನ್ನು ಲಿಂಗರಾಜು ಸ್ಥಾನಕ್ಕೆ ಕರೆಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ ಜೈಲಿಗೆ ಹೋದ ಕೂಡಲೇ ಆಸ್ಪತ್ರೆಗೆ ಸೇರಿಸಲು ಅಧೀಕ್ಷಕರು ಆಸ್ಪದ ನೀಡಿರಲಿಲ್ಲ. ಗಣ್ಯರಿಗೂ ಆದ್ಯತೆ ಕೊಡುತ್ತಿರಲಿಲ್ಲ. ಇದರಿಂದ ವಿಐಪಿ ಕೈದಿಗಳ ಸ್ವಾತಂತ್ರ್ಯಕ್ಕೆ ಲಕ್ಷ್ಮೀನಾರಾಯಣರಿಂದ ಅಡ್ಡಿಯಾಗಿತ್ತು.

ಈಗ ಕಲುಷಿತ ನೀರು ಕುಡಿದು ಕೈದಿಗಳು ಅಸ್ವಸ್ಥಗೊಂಡ ವಿಚಾರವನ್ನೇ ನೆವ ಮಾಡಿಕೊಂಡು ಲಕ್ಷ್ಮೀನಾರಾಯಣ ಅವರನ್ನು ಎತ್ತಂಗಡಿ ಮಾಡಲು ಸಂಚು ರೂಪಿಸಲಾಗಿದೆ. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಕ್ಷ್ಮೀನಾರಾಯಣ ಅವರನ್ನು ದಿಢೀರ್ ವರ್ಗಾವಣೆ ಮಾಡಿದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ