ದಾವೂದ್ ಬಂಟರಿಂದ ಗಣ್ಯರ ಅಪಹರಣದ ಸಂಚು

ಸೋಮವಾರ, 30 ಮಾರ್ಚ್ 2009 (18:43 IST)
ರಾಜಕಾರಣಿಗಳು ಹಾಗೂ ಗಣ್ಯರ ಅಪಹರಣಕ್ಕೆ ಸಂಚು ರೂಪಿಸಿದ್ದ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಐವರು ಸಹಚರರನ್ನು ಉಳ್ಳಾಲ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿರುವುದಾಗಿ ಪೊಲೀಸ್ ಮಹಾನಿರ್ದೇಶಕ ಅಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಸೋಮವಾರ ಸಂಜೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಸರಗೋಡಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಆಗಂತುಕ ಪಡೆಯನ್ನು ಖಚಿತ ಮಾಹಿತಿ ಆಧಾರದ ಮೇಲೆ ಸೆರೆ ಹಿಡಿಯಲಾಗಿದೆ ಎಂದು ವಿವರಿಸಿದರು.

ಬಂಧಿತರನ್ನು ಇಂಟರ್‌ಪೋಲ್‌ಗೆ ಬೇಕಾಗಿದ್ದ ಮುಂಬೈ ಮೂಲದ ಕ್ರಿಮಿನಲ್ ರಶೀದ್ ಮಲಬಾರಿ, ಮಹಾರಾಷ್ಟ್ರ ಥಾಣೆಯ ಸಾಯಿಲ್ ಇಸ್ಮಾಯಿಲ್, ಕಾಪು ನಿವಾಸಿ ಇಬ್ರಾಹಿಂ ಹಾಗೂ ಕಾಸರಗೋಡಿನ ಸಯಾಫ್, ಮೊಹಮ್ಮದ್ ಕಾಸಿಂ ಎಂದು ಗುರುತಿಸಲಾಗಿದೆ.

ದಾವೂದ್ ಸಹಚರರಾದ ಈ ಐವರಿಂದ ಬಂದೂಕು, ಸಜೀವ ಗುಂಡು, ಕಾರು, ಸ್ವದೇಶಿ-ವಿದೇಶಿ ಸಿಮ್ ಕಾರ್ಡ್ ಹಾಗೂ 19ಸಾವಿರ ರೂ.ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಇಂದು ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಐವರಿಗೂ ಏಪ್ರಿಲ್ 13ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಶಂಕಿತ ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರಿಗೆ 2ಲಕ್ಷ ರೂ. ಇನಾಮು ಘೋಷಿಸಿರುವುದಾಗಿ ಡಾ.ಸಿಂಗ್ ಹೇಳಿದರು.

ವೆಬ್ದುನಿಯಾವನ್ನು ಓದಿ