ದೇಹದಾನಿ ಡಾ.ರಾಮಣ್ಣ ಹೆಸರು ಅಮರ: ಕೋರೆ

ಭಾನುವಾರ, 14 ನವೆಂಬರ್ 2010 (15:23 IST)
ಕೆಎಲ್ಇ ಸಂಸ್ಥೆಯ ಇತಿಹಾಸದಲ್ಲಿ ದೇಹದಾನಿ ಡಾ. ಬಿ.ಎಸ್.ರಾಮಣ್ಣವರ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಲು ತಾವು ಕ್ರಮ ಕೈಗೊಳ್ಳುವುದಾಗಿ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ತಿಳಿಸಿದ್ದಾರೆ.

ಡಾ. ಬಿ.ಎಸ್. ರಾಮಣ್ಣವರ ದೇಹ ಛೇದನ ನಡೆದ ನಗರದ ಬಿ.ಎಂ. ಕಂಕಣವಾಡಿ ಆಯುರ್ವೇದ ಆಸ್ಪತ್ರೆಗೆ ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಸುವರ್ಣಾಕ್ಷರದಲ್ಲಿ ಬರೆದ ಪತ್ರ ಮತ್ತು ರಾಮಣ್ಣವರ ಕೆಎಲ್ಇಗೆ ನೀಡಿದ್ದ ದಂತ ವೈದ್ಯಕೀಯದ ಉಪಕರಣ ಒಳಗೊಂಡ ಕುರ್ಚಿಯನ್ನು ಕೆಎಲ್ಇ ಮ್ಯೂಸಿಯಂದಲ್ಲಿ ಇಡಲಾಗುವುದು ಎಂದರು.

ಮಗ ತಂದೆಯ ದೇಹ ಛೇದನ ಮಾಡಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವುದು ಜಗತ್ತಿನಲ್ಲಿ ಇದು ಮೊದಲ ಘಟನೆಯಾಗಿದೆ. ಜನರ ಮನ ಪರಿವರ್ತನೆಗೆ ಮಾದರಿಯೂ ಆಗಿದೆ. ಇದು ಕೆಎಲ್ಇ ಸಂಸ್ಥೆಯಲ್ಲಿ ನಡೆಯುತ್ತಿರುವುದು ತಮಗೆ ಅತೀವ ಹೆಮ್ಮೆ ತರಿಸಿದೆ ಎಂದರು.

ಕೆಎಲ್ಇ ಸ್ಥಾಪನೆಯಾಗಿ ನ. 13ಕ್ಕೆ 95 ವರ್ಷವಾಯಿತು. ಇದೇ ದಿನ ಸಂಸ್ಥೆಯಲ್ಲಿ ಇಂಥ ಮಹತ್ವದ ಕಾರ್ಯ ನಡೆಯುತ್ತಿರುವುದು ಸಂಸ್ಥೆ ಕಟ್ಟಿದ ಸಪ್ತರ್ಷಿಗಳಿಗೆ ಗೌರವ ತಂದಿದೆ. ಡಾ. ಬಿ.ಎಸ್.ರಾಮಣ್ಣವರು ತ್ಯಾಗಿಗಳ ಸಾಲಿಗೆ ಸೇರಿದ್ದಾರೆ. ಇವರೆಲ್ಲ ಕಾಯಕ ಯೋಗಿಗಳು. ಮಗ ತಂದೆಗೆ, ತಂದೆ ಮಗನಿಗೆ ಇಂಜೆಕ್ಷನ್ ನೀಡಲೂ ಹಿಂಜರಿಯುತ್ತಾರೆ. ಆಪರೇಷನ್ ಕೆಲಸವಿದ್ದರಂತೂ ಯಾರು ಯಾರನ್ನೂ ಮುಟ್ಟುವುದಿಲ್ಲ. ಅಷ್ಟೊಂದು ಭಾವನಾತ್ಮಕತೆಗೆ ಒಳಗಾಗುತ್ತಾರೆ. ಆದರೆ ಇಲ್ಲಿ ಡಾ. ಮಹಾಂತೇಶನ ಕೆಲಸ ಅದ್ಬುತವಾಗಿದೆ. ಧೈರ್ಯ ಮತ್ತು ತಾಳ್ಮೆ ತೋರಿದ್ದಾರೆ ಎಂದು ಶ್ಲಾಘಿಸಿದರು.

ವೆಬ್ದುನಿಯಾವನ್ನು ಓದಿ