ಕನ್ನಡದ ಖ್ಯಾತ ಹಿರಿಯ ನಟಿ ಜಯಂತಿಯವರ ಮಗನ ಮೇಲೆ ಹಣ ಗುಳುಂ ಮಾಡಿದ ಆರೋಪ ಕೇಳಿ ಬಂದಿದೆ. ಅಷ್ಟೆ ಅಲ್ಲ, ಪ್ರವಾಸೋದ್ಯಮದ ನೀತಿಯನ್ನು ಉಲ್ಲಂಘಿಸಿದ್ದಾರೆ ಎಂಬ ಕೂಗುಗಳೂ ಕೂಡ ಜಯಂತಿ ಪುತ್ರ ಕೃಷ್ಣಕುಮಾರ್ ಅವರ ಮೇಲೆ ಕೇಳಿಬಂದಿವೆ.
ಹಂಪಿ ಬೈನೈಟ್ ಯೋಜನೆಯನ್ನು ನಟಿ ಜಯಂತಿಯವರ ಪುತ್ರ ಕೃಷ್ಣಕುಮಾರ್ ಅವರ ಮಾಲೀಕತ್ವದ ಇನ್ನೋವೇಟಿವ್ ಲೈಟಿಂಗ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಕಾಮಗಾರಿಯೊಂದನ್ನು ಒಪ್ಪಿಕೊಂಡಿದ್ದ ಜಯಂತಿಯವರ ಮಗ ಅದನ್ನು ಇದುವರೆಗೂ ಪೂರ್ಣಗೊಳಿಸಿಲ್ಲ. ಕಳೆದ ಜನವರಿ ತಿಂಗಳಲ್ಲಿಯೇ ಈ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಹಣ ಪಡೆದುಕೊಂಡ ಇನೋವೆಟಿವ್ ಲೈಟಿಂಗ್ ಸಂಸ್ಥೆ ಇನ್ನು ಬಹಳಷ್ಟು ಕೆಲಸ ಬಾಕಿ ಉಳಿಸಿದೆ.
ಸುಮಾರು 11.45 ಕೋಟಿ ರೂಪಾಯಿಗಳ ಈ ಕಾಮಗಾರಿಯಲ್ಲಿ ಈಗಾಗಲೇ 8.50 ಕೋಟಿ ಹಣವನ್ನು ಕೃಷ್ಣ ಕುಮಾರ್ ಅವರಿಗೆ ಸಂದಾಯ ಮಾಡಲಾಗಿದೆ. ಆದಾಗ್ಯೂ ಕೂಡ ಕಾಮಗಾರಿ ಇನ್ನೂ ಮುಕ್ತಾಯಗೊಂಡಿಲ್ಲ. ಅಷ್ಟೇ ಅಲ್ಲ, ಕೃಷ್ಣ ಕುಮಾರ್ ಅವರು ಪ್ರವಾಸೋದ್ಯಮದ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಜಿಲ್ಲಾಡಳಿತ ಆರೋಪಿಸಿದೆ. ಹೀಗಾಗಿ ಕೃಷ್ಣಕುಮಾರ್ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಜಿಲ್ಲಾಡಳಿತ ಪತ್ರ ರವಾನಿಸಿದೆ.