ನಿಲೇಕಣಿ ದಕ್ಷಿಣ ಲೋಕಸಭೆಯಲ್ಲಿ ನಿಲ್ಲುವುದಕ್ಕೆ ದಿನೇಶ್ ಗುಂಡೂರಾವ್ ಅಪಸ್ವರ

ಗುರುವಾರ, 16 ಜನವರಿ 2014 (13:42 IST)
PR
PR
ಬೆಂಗಳೂರು: ವಿಶಿಷ್ಠ ಗುರುತು ಪ್ರಾಧಿಕಾರದ ಅಧ್ಯಕ್ಷ ನಂದನ್ ನಿಲೇಕಣಿ ಅವರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆಂಬ ವಿಷಯ ತಿಳಿಯುತ್ತಿದ್ದಂತೆ ಕಾಂಗ್ರೆಸ್‌ನ ಕೆಲವು ಮುಖಂಡರು ಅಪಸ್ವರವೆತ್ತಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ದಿನೇಶ್ ಗುಂಡೂರಾವ್ ಈ ಕುರಿತು ಪತ್ರ ಬರೆದಿದ್ದು, ಕಾಂಗ್ರೆಸ್‌ಗೆ ಸ್ಥಳೀಯರನ್ನು ಅಭ್ಯರ್ಥಿಯಾಗಿ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಹೈ ಪ್ರೊಫೈಲ್‌ ಕ್ಷೇತ್ರವಾಗಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿಯ ಅನಂತಕುಮಾರ್ ಕಣಕ್ಕಿಳಿಯಲಿದ್ದಾರೆ.

ಅವರಿಗೆ ವಿರುದ್ಧವಾಗಿ ಸ್ಥಳೀಯವಾಗಿ ಪರಿಚಿತರಾಗಿರುವ ಪ್ರಬಲ ಮುಖಂಡರನ್ನು ಇಳಿಸಿದರೆ ಗೆಲುವು ಸುಲಭವಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರಾದ ಯು.ಬಿ.ವೆಂಕಟೇಶ್ ಅವರಿಗೆ ಟಿಕೆಟ್ ನೀಡುವಂತೆ ನಾವೆಲ್ಲ ವಿನಂತಿಸುತ್ತೇವೆ ಎಂದು ದಿನೇಶ್ ಗುಂಡೂರಾವ್ ಪತ್ರದಲ್ಲಿ ಹೇಳಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರಕ್ಕೆ ಒಳಪಡುವ 16 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕೂಡ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ನಂದನ್ ನಿಲೇಕಣಿ ಸ್ಪರ್ಧೆಗೆ ವಿರೋಧ ಸೂಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ