ಪಟ್ಟಭದ್ರ ಹಿತಾಸಕ್ತಿಗಳಿಂದ ರಾಜೀನಾಮೆ ದುರ್ಬಳಕೆ: ಶೆಣೈ

ಗುರುವಾರ, 9 ಜೂನ್ 2016 (15:51 IST)
ತಮ್ಮ ತಮ್ಮ ಹಿತಾಸಕ್ತಿಗಳಿಗೆ ನನ್ನ ರಾಜೀನಾಮೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೂಡ್ಲಿಗಿ ಡಿವೈಎಸ್‌ಪಿ ಅನುಪಮಾ ಶೆಣೈ ಹೇಳಿದ್ದಾರೆ.
 
ಕೂಡ್ಲಿಗಿಯಲ್ಲಿರುವ ತಮ್ಮ ವಸತಿಗೃಹದಿಂದ ಹೊರಬಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿರುವ ಕೂಡ್ಲಿಗಿ ಡಿವೈಎಸ್‌ಪಿ ಅನುಪಮಾ ಶೆಣೈ, ನನ್ನದು ಯಾವುದೇ ಫೇಸ್‌ಬುಕ್ ಖಾತೆ ಇಲ್ಲ. ನನ್ನ ರಾಜೀನಾಮೆಗೆ ನಾನು ಬದ್ಧವಾಗಿದ್ದೇನೆ. ಕೆಲವರು ತಮ್ಮ ತಮ್ಮ ಹಿತಾಸಕ್ತಿಗಳಿಗೆ ನನ್ನ ರಾಜೀನಾಮೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
 
ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಸರಕಾರ ಮತ್ತು ಇಲಾಖೆ ಕುರಿತು ಅವಹೇಳನಕಾರ ಪೋಸ್ಟ್ ಮಾಡುತ್ತಿರುವ ಕುರಿತು ಮಾಧ್ಯಮದವರು ಪ್ರಶ್ನೆಗೆ ಉತ್ತರಿಸಿರುವ ಅನುಪಮಾ ಶೆಣೈ, ಯಾರು ಪೋಸ್ಟ್ ಮಾಡುತ್ತಿದ್ದಾರೆ ಅವರನ್ನೇ ಹೋಗಿ ಕೇಳಿ ಎಂದು ಹೇಳಿದ್ದಾರೆ. ನಿಮ್ಮ ಫೇಸ್‌ಬುಕ್ ಹ್ಯಾಕ್ ಆಗಿರುವ ಕುರಿತು ಯಾಕೆ ಪ್ರಕರಣ ದಾಖಲಿಸಿಲ್ಲ ಎಂದು ಕೇಳಿದರೆ ಎಲ್ಲದಕ್ಕೂ ಪ್ರಕರಣ ದಾಖಲಿಸಲು ಸಾಧ್ಯವಾಗುತ್ತಾ ಎಂದು ಮರುಪ್ರಶ್ನಿಸಿದರು.
 
ತಮ್ಮ ರಾಜೀನಾಮೆಗೆ ಬದ್ಧವಾಗಿರುವ ಅನುಪಮಾ ಶೆಣೈ, ತಮ್ಮ ಹೋರಾಟವನ್ನು ಕಾನೂನು ರೀತಿಯಲ್ಲಿ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ. ತಮ್ಮ ಲಗೇಜ್ ಸಮೇತ ಸ್ವಂತ ಊರಿಗೆ ತೆರಳುತ್ತಿರುವ ಅವರು ನಾನು ಈಗಾಗಲೇ ರಾಜೀನಾಮೆ ನೀಡಿದ್ದೇನೆ ನಾನೇಕೆ ಎಸ್‌ಪಿ ಚೇತನ್ ಅವರನ್ನು ಭೇಟಿ ಮಾಡಲಿ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ