ಪ್ರತಿಭಟನೆಯಿಂದ ರಾಜ್ಯಕ್ಕೆ ಲಾಭವಿಲ್ಲ: ರಾಜ್ಯಪಾಲ ಭಾರದ್ವಾಜ್

ಶನಿವಾರ, 6 ಅಕ್ಟೋಬರ್ 2012 (10:31 IST)
PR
ಕಾವೇರಿ ನೀರು ತಮಿಳುನಾಡಿಗೆ ಬಿಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆಯ ಕಿಚ್ಚು ಹೆಚ್ಚುತ್ತಿರುವ ನಡುವೆಯೇ ಪ್ರತಿಭಟನೆ, ಬಂದ್‌ನಿಂದ ರಾಜ್ಯಕ್ಕೆ ಯಾವುದೇ ಲಾಭವಿಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದ್ದಾರೆ.

ಶುಕ್ರವಾರ ಕಾವೇರಿ ವಿವಾದದ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ಮಾತನಾಡಿದ ಅವರು, ಮೊದಲು ಕಾನೂನನ್ನು ಗೌರವಿಸಬೇಕು. ಹಿರಿಯ ವಕೀಲ ನಾರಿಮನ್ ಉತ್ತಮವಾಗಿ ವಾದ ಮಂಡಿಸಲಿದ್ದಾರೆ. ಆದರೆ ಪ್ರತಿಭಟನೆಯಿಂದ ಯಾವ ರಾಜ್ಯಕ್ಕೂ ಲಾಭವಿಲ್ಲ ಎಂದು ಹೇಳಿದರು.

ನಾನು ಕಾವೇರಿ ವಿವಾದದ ವಿಚಾರದಲ್ಲಿ ರಾಜ್ಯದ ಪರವಾಗಿ ನಿಲ್ಲುವೆ ಎಂದ ಗವರ್ನರ್, ನಮ್ಮಲ್ಲಿ ಸಂವಿಧಾನವಿದೆ, ಕಾನೂನಿದೆ. ಹಾಗಾಗಿ ನಾವು ಆ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ತಿಳಿಸಿದರು.

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ವಿರೋಧಿಸಿ ಕಾವೇರಿ ಹಿತರಕ್ಷಣಾ ವೇದಿಕೆ, ಕನ್ನಡ ಪರ ಸಂಘಟನೆ, ರೈತ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸುತ್ತಿವೆ. ಅಲ್ಲದೇ ಶನಿವಾರ ಕರ್ನಾಟಕ ಬಂದ್‌ಗೂ ಕರೆ ನೀಡಿದ್ದು, ನೂರಾರು ಸಂಘಟನೆಗಳು ಬೆಂಬಲ ಸೂಚಿಸಿವೆ.

ವೆಬ್ದುನಿಯಾವನ್ನು ಓದಿ