ಬಸ್ ದುರಂತ: ಡಿಎನ್‌ಎ ಪರೀಕ್ಷೆಯ ನಂತರ ಮೃತರ ಗುರುತು ಪತ್ತೆ

ಶುಕ್ರವಾರ, 15 ನವೆಂಬರ್ 2013 (13:31 IST)
PR
PR
ಹಾವೇರಿ: ಹಾವೇರಿಯಲ್ಲಿ ವೋಲ್ವೋ ಬಸ್‌ಗೆ ಬೆಂಕಿ ಹೊತ್ತಿಕೊಂಡ ದುರಂತದಲ್ಲಿ ಮೃತಪಟ್ಟವರು ಮೊಹಮ್ಮದ್ ಕೈಫ್, ಅಮನ್ ಖಲೀಮ್ ಖಾನ್, ನೌಮನ್ ಖಲೀಮ್ ಖಾನ್, ಶಮೀಮ್ ಬಾನು, ಖಲೀಂ ಅಹಮದ್, ನಯಾಝ್ ಪಾಷಾ, ಹೇಮಂತ್ ಎಂದು ಹೇಳಲಾಗಿದೆ. ಮೃತರ ಸಂಬಂಧಿಕರು ಭಾವಚಿತ್ರಗಳನ್ನು ಹಿಡಿದುಕೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ. ಡಿಎನ್‌ಎ ವರದಿಯ ಬಳಿಕ ಮೃತರ ಗುರುತನ್ನು ಪತ್ತೆಹಚ್ಚಲಾಗುತ್ತದೆ, ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲು ಏಳು ದಿವಸಗಳ ಕಾಲ ಕಾಯಬೇಕೆಂದು ವೈದ್ಯರು ಹೇಳಿದ್ದಾರೆ. ಡಿಎನ್‌ಎ ಪರೀಕ್ಷೆ ನಂತರವೇ ಮೃತದೇಹಗಳನ್ನು ಹಸ್ತಾಂತರ ಮಾಡುವುದಾಗಿ ವೈದ್ಯರು ಹೇಳಿದರು.

ಆದರೆ ಏಳು ದಿನಗಳವರೆಗೆ ಕಾಯುವುದಕ್ಕೆ ಆಗುವುದಿಲ್ಲ ಎಂದು ಮೃತರ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ. ಗಾಯಗೊಂಡವರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರಿಗೆ ಕಾಲಿನಲ್ಲಿ ಗಾಯ, ಇನ್ನೂ ಕೆಲವರಿಗೆ ಸುಟ್ಟ ಗಾಯ, ಇನ್ನೂ ಕೆಲವರು ಪ್ರಾಣ ಉಳಿಸಿಕೊಳ್ಳಲು ಬಸ್ ಕಿಟಕಿಯಿಂದ ಹಾರಿದ್ದರಿಂದ ಕಾಲಿನ ಮೂಳೆ ಮುರಿದಿದೆ.

ವೆಬ್ದುನಿಯಾವನ್ನು ಓದಿ