ಬಿಜೆಪಿ ಒಂದೊಂದೇ ಹಗರಣಗಳು ಹೊರಬರುತ್ತಿದೆ: ಪೂಜಾರಿ

ಭಾನುವಾರ, 3 ಅಕ್ಟೋಬರ್ 2010 (16:20 IST)
ಬಿಜೆಪಿ ಸರಕಾರದ ಒಂದೊಂದೇ ಹಗರಣಗಳು ಹೊರಬರುತ್ತಿದೆ. ಬಿಜೆಪಿಯವರಿಗೆ ಇನ್ನೂ ಅಧಿಕಾರದಲ್ಲಿ ಮುಂದುವರಿಯುವ ಅವಕಾಶ ಕೊಟ್ಟರೆ ರಾಜ್ಯದ ಎಲ್ಲ ಸರಕಾರಿ ಜಾಗವನ್ನೂ ಮಾರಿ ನೀರು ಕುಡಿದು ಬಿಟ್ಟಾರು ಎಂದು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಲೇವಡಿ ವ್ಯಂಗ್ಯವಾಡಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಸಮಯದಿಂದಲೇ ಹಗರಣಗಳ ಸರಮಾಲೆ ಸುತ್ತಿಕೊಂಡೇ ಆಡಳಿತ ನಡೆಸುತ್ತಿದೆ. ಈಗಾಗಲೇ ಕೃಷ್ಣಯ್ಯ ಶೆಟ್ಟಿ, ಹರತಾಳು ಹಾಲಪ್ಪ, ರಾಮಚಂದ್ರ ಗೌಡ ಮತ್ತಿತರರು ಸಚಿವ ಸ್ಥಾನ ಬಿಡಬೇಕಾಗಿ ಬಂತು. ಇದೀಗ ಮತ್ತೊಂದು ಬೃಹತ್ ಭೂ ಹಗರಣದಲ್ಲಿ ಸರಕಾರ ಸಿಕ್ಕಿ ಹಾಕಿಕೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಬೆಂಗಳೂರು ಜಲಮಂಡಳಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕುಟುಂಬ ಸುಮಾರು ಮೂರು ಸಾವಿರ ಎಕರೆ ಜಮೀನು ಮಾರಾಟ ಅವ್ಯವಹಾರದಲ್ಲಿ ಪಾಲ್ಗೊಂಡಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಕೇಳಿಲ್ಲ. ಇನ್ನೊಂದೆಡೆ ಸಿಎಂ ಮಗನೇ ಸುಳ್ಳು ಅಫಿಡವಿತ್ ನೀಡಿ ಚುನಾವಣೆಗೆ ಸ್ಪರ್ಧಿಸಿರುವ ಪ್ರಕರಣ ಕೂಡಾ ಬೆಳಕಿಗೆ ಬಂದಿದ್ದು, ಚುನಾವಣಾ ಆಯೋಗ ಆಯ್ಕೆಯನ್ನೇ ರದ್ದುಪಡಿಸುವ ಸಾಧ್ಯತೆ ಇದೆ ಎಂದರು.

ಅಧಿಸೂಚನೆ ಹೊರಡಿಸಿದ ಭೂಮಿಯನ್ನು ಬಲವಾದ ಕಾರಣವಿಲ್ಲದೆ ತರಾತುರಿಯಲ್ಲಿ ಡಿನೋಟಿಫೈ ಮಾಡುವುದು ಕ್ರಿಮಿನಲ್ ಅಪರಾಧ. ಸರಕಾರ ಪ್ರೇರಿತ ಹಗರಣಗಳು ನಿಲ್ಲಬೇಕಾದರೆ ಸಚಿವರಿಂದ ಆಗಾಗ ರಾಜೀನಾಮೆ ಪಡೆಯುವ ಬದಲಿಗೆ ಒಮ್ಮೆಗೇ ಮುಖ್ಯಮಂತ್ರಿ ರಾಜೀನಾಮೆ ಕೊಟ್ಟು ಹೋಗಲಿ. ಆದರೆ ಅವರದ್ದು ಧೃತರಾಷ್ಟ್ರ ಪ್ರೀತಿ. ಪುತ್ರ ವ್ಯಾಮೋಹ ಹಾಗೂ ಎಲ್ಲ ಮೋಹದಿಂದ ಕೂಡಿದ್ದರೂ ಪತ್ನಿ ಮೋಹ ಇರಲಿಲ್ಲ ಎಂದು ಅವರು ಟೀಕಿಸಿದರು.

ವೆಬ್ದುನಿಯಾವನ್ನು ಓದಿ