ಮಂಜುನಾಥನ ಸಾವಲ್ಲಿ ಯಾಸಿನ್ ಭಟ್ಕಳ್ ಕೈವಾಡದ ಶಂಕೆ: ತನಿಖೆಗೆ ಒತ್ತಾಯ

ಶುಕ್ರವಾರ, 22 ನವೆಂಬರ್ 2013 (20:05 IST)
PR
PR
ಬೆಂಗಳೂರು: ಮಲೆನಾಡಿನಲ್ಲಿ ಮಂಜುನಾಥ್ ಎಂಬ ವ್ಯಕ್ತಿಯ ಅನುಮಾನಾಸ್ಪದ ಸಾವಿನ ವಿಚಾರ ಈಗ ದೊಡ್ಡ ವಿವಾದವಾಗಿ ಪರಿಣಮಿಸಿದೆ. ಮಲೆನಾಡಿನಲ್ಲಿ ಕುಖ್ಯಾತ ಉಗ್ರಗಾಮಿಗಳು ತಮ್ಮ ಕರಾಳಬಾಹುಗಳನ್ನು ಚಾಚಿದ್ದಾರೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಈ ಕುಖ್ಯಾತ ಭಯೋತ್ಪಾದಕ, ಇಂಡಿಯನ್ ಮುಜಾಹಿದ್ದೀನ್ ಸಂಸ್ಥಾಪಕ ಯಾಸಿನ್ ಭಟ್ಕಳ್. ಮಂಜುನಾಥ್ ಸಾವಿನ ಹಿಂದೆ ಯಾಸಿನ್ ಭಟ್ಕಳ್ ಕೈವಾಡವಿದೆ . ಈ ಕುರಿತು ಸರ್ಕಾರ ತನಿಖೆ ನಡೆಸಬೇಕು ಎಂದು ಅವರ ಸಹೋದರಿಯರಾದ ಹೇಮಾರವಿ ಮತ್ತು ಶುಭಾ ಒತ್ತಾಯಿಸಿದ್ದಾರೆ. ಮಂಜುನಾಥ್ ಸಾವಿನ ಬಗ್ಗೆ ಪೊಲೀಸರು ಗಂಭೀರ ತನಿಖೆ ನಡೆಸಲಿಲ್ಲ.

ಈ ಪ್ರಕರಣವನ್ನು ಆತ್ಮಹತ್ಯೆಯೆಂದು ಪೊಲೀಸರು ಮುಚ್ಚಿಹಾಕಿದರು ಎಂದು ಸಹೋದರಿಯರು ಆರೋಪಿಸಿದ್ದಾರೆ. ಯಾಸಿನ್ ಭಟ್ಕಳ್ ಬಂಧನದ ನಂತರ ಅವನ ಫೋಟೊವನ್ನು ಪತ್ರಿಕೆಯಲ್ಲಿ ನೋಡಿದ ಮೇಲೆ ಮಂಜುನಾಥ್ ಕುಟುಂಬ ಬೆಚ್ಚಿಬಿದ್ದಿದೆ. ಮಂಜುನಾಥ್ ಅವರ ಮನೆಯ ಕಾರ್ಯಕ್ರಮಕ್ಕೆ ಯಾಸಿನ್ ಭಟ್ಕಳ್ ಸುಮಾರು 2 ವರ್ಷಗಳ ಹಿಂದೆ ಬಂದಿದ್ದು, ಮಂಜುನಾಥನ ಅನುಮಾನಾಸ್ಪದ ಸಾವಿನ ಹಿಂದೆ ಯಾಸಿನ್ ಭಟ್ಕಳ್ ಕೈವಾಡವಿರಬಹುದೆಂದು ಸಹೋದರಿಯರು ಶಂಕಿಸಿದ್ದಾರೆ.

ತಮ್ಮ ಸಹೋದರ ಮಂಜುನಾಥನ ಜತೆ ಸುಮಾರು 15 ದಿನಗಳವರೆಗೆ ಒಡನಾಟವಿದ್ದ ಇವನು ಕುಖ್ಯಾತ ಭಯೋತ್ಪಾದಕನೆಂದು ತಿಳಿದು ಸಹೋದರಿಯರು ದಿಗ್ಭ್ರಾಂತರಾಗಿದ್ದಾರೆ. ಯಾಸಿನ್ ಭಟ್ಕಳ್ ಭಯೋತ್ಪಾದನೆ ಚಲನವಲನಗಳ ಬಗ್ಗೆ ಮಂಜುನಾಥನಿಗೆ ಮಾಹಿತಿ ಸಿಕ್ಕಿರುವುದು ಯಾಸಿನ್‌ಗೆ ಗೊತ್ತಾಗಿ ಅವನು ಮಂಜುನಾಥನನ್ನು ಕೊಂದಿರಬಹುದು ಎಂದು ಸಹೋದರಿಯರು ಶಂಕಿಸಿದ್ದಾರೆ. ಸರ್ಕಾರ ಈ ಕುರಿತು ಸೂಕ್ತ ತನಿಖೆ ನಡೆಸಿ ಮಂಜುನಾಥ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಬಿಜೆಪಿ ನಾಯಕಿ ಶೋಭಾ ಕಾರಂದ್ಲಜೆ ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ