ಮಹಿಳೆಯೊಬ್ಬಳ ಭೀಕರ ಕೊಲೆ: ನಗ ನಾಣ್ಯ ಲೂಟಿ

ಬುಧವಾರ, 23 ಜನವರಿ 2008 (17:56 IST)
ಮಹಿಳೆಯೋರ್ವಳನ್ನು ಅಮಾನುಷ ರೀತಿಯಲ್ಲಿ ಕೊಂದ ದುಷ್ಕರ್ಮಿಗಳು ಸುಮಾರು 12 ಲಕ್ಷ ರೂ. ಮೌಲ್ಯದ ನಗ ನಾಣ್ಯ ದೋಚಿ ಪರಾರಿಯಾಗಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.

ಬೋರ್ವೆಲ್ ಗುತ್ತಿಗೆದಾರರಾದ ಅರಸುರವರ ಪತ್ನಿ ಸೆಲ್ವಿಯವರನ್ನು ದೀಪದ ಕಂಬದಿಂದ ಚುಚ್ಚಿ, ನಂತರ ಉಸಿರುಗಟ್ಟಿ ಸಾಯಿಸಿ ನಗ-ನಾಣ್ಯ ದೋಚಿಕೊಂಡು ಹೋಗಿರುವುದು ತಿಳಿದು ಬಂದಿದೆ. ಅರಸು ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಾಗ ಈ ದುರ್ಘಟನೆ ನಡೆದಿತ್ತು.

ಈ ಹಿಂದೆ ಅರಸು-ಸೆಲ್ವಿ ದಂಪತಿಗಳ ಪುತ್ರ 8 ತಿಂಗಳ ಹಿಂದೆಯೇ ಅಪಘಾತದಲ್ಲಿ ಮೃತ ಪಟ್ಟಿದ್ದ ಹಾಗೂ ಇನ್ನೊಬ್ಬ ಮಗ ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಹೀಗಾಗಿ ಮನೆಯಲ್ಲಿ ಒಬ್ಬರೇ ಇರುವುದನ್ನು ಖಾತ್ರಿ ಮಾಡಿಕೊಂಡು ಒಳ ನುಗ್ಗಿದ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮನೆಯಲ್ಲಿದ್ದ 5ಲಕ್ಷ ರೂ. ಮೌಲ್ಯದ ಚಿನ್ನದ ನಾಣ್ಯಗಳು, ಮಾಂಗಲ್ಯ ಸರ, ಸುಮಾರು 2 ಲಕ್ಷ ರೂ.ನಷ್ಟು ಹಣವನ್ನು ಲೂಟಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಭೇಟಿ ನೀಡಿರುವ ಡಿಸಿಪಿ ಶರತ್ ಚಂದ್ರ ಕೊಲೆಗಾರರ ಹುಡುಕಾಟಕ್ಕೆ ತೀವ್ರ ತನಿಖೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ