ಮುತಾಲಿಕ್‌‌ ಬಂಧನಕ್ಕೆ ವಾರೆಂಟ್

ಸೋಮವಾರ, 22 ಸೆಪ್ಟಂಬರ್ 2008 (11:25 IST)
ಧಾರವಾಡದಲ್ಲಿ ಇತ್ತೀಚೆಗೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಹೊತ್ತಿರುವ ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರ ಬಂಧನಕ್ಕೆ ವಾರೆಂಟ್ ಹೊರಡಿಸಲಾಗಿದೆ. ಭೂಗತರಾಗಿರುವ ಅವರು ಕೆಲವು ಪ್ರಕರಣಗಳ ವಿಚಾರಣೆಗೆ ಸೋಮವಾರ ಇಲ್ಲಿನ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ ಇದೆ.

ಧಾರವಾಡ ಪ್ರಕರಣದಲ್ಲಿ ಅವರ ಮೇಲಿರುವ ವಾರೆಂಟ್‌‌ನಲ್ಲಿ ರಾಜ್ಯದ ಯಾವುದೇ ಭಾಗದಲ್ಲಿ ಮುತಾಲಿಕ್ ಸಾರ್ಜನಿಕವಾಗಿ ಕಾಣಿಸಿಕೊಂಡಲ್ಲಿ ಅವರನ್ನು ಬಂಧಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ಮುತಾಲಿಕ್ ಮಂಗಳೂರು ಬಂದ್‌‌ಗೂ ಕರೆ ನೀಡಿದ್ದರು. ಇದರೊಂದಿಗೆ ಅವರ ವಿರುದ್ಧ ಪ್ರಕರಣಗಳು ಕೂಡಾ ದಾಖಲಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಮುತಾಲಿಕ್ ಅವರನ್ನು ಬಂಧಿಸಬಾರದು ಎಂದು ಶ್ರೀರಾಮ ಸೇನೆ ಸರ್ಕಾರಕ್ಕೆ ಮನವಿ ಮಾಡಿದೆ. ಒಂದು ವೇಳೆ ಮುತಾಲಿಕ್ ಅವರನ್ನು ಬಂಧಿಸಿದರೆ ರಾಜ್ಯಾದ್ಯಂತ ಭುಗಿಲೇಳುವ ಅಶಾಂತಿಗೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರವೇ ಹೊಣೆ ಎಂದು ಶ್ರೀರಾಮ ಸೇನೆ ಮುಖಂಡ ಸಿದ್ಧಲಿಂಗಪ್ಪ ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ