ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ: ಈ ಬಾರಿ ಗೆಲುವು ಯಾರಿಗೆ?

ಮಂಗಳವಾರ, 8 ಏಪ್ರಿಲ್ 2014 (19:55 IST)
PR
PR
ಮೈಸೂರು ಅರಮನೆ ನಗರಿ, ನಿವೃತ್ತರ ಸ್ವರ್ಗ ಎಂಬ ಖ್ಯಾತಿ ಪಡೆದಿದ್ದು, ಕೊಡಗು ಪ್ರವಾಸಿ ಕೇಂದ್ರವಾಗಿ ಹೆಸರು ಪಡೆದಿದೆ. ಹಾಲಿ ಸಂಸದ ಎಚ್.ವಿಶ್ವನಾಥ್ ಮೇಲೆ ವಿಶ್ವಾಸವಿಟ್ಟು ಕಾಂಗ್ರೆಸ್ ಅವರನ್ನೇ ಲೋಕಸಭೆ ಚುನಾವಣೆಗೆ ಕಣಕ್ಕಿಳಿಸಿದೆ. ಪತ್ರಕರ್ತ, ಅಂಕಣಕಾರ ಪ್ರತಾಪ್ ಸಿಂಹ ಅವರನ್ನು ಬಿಜೆಪಿ ಹೊಸಮುಖವಾಗಿ ಕಣಕ್ಕಿಳಿಸಿದೆ. ಕಳೆದ ಬಾರಿ ವಿಶ್ವನಾಥ್ 3,54810 ಮತಗಳನ್ನು ಗಳಿಸಿದ್ದರೆ, ವಿಜಯಶಂಕರ್ 2,46, 445 ಮತಗಳನ್ನು ಗಳಿಸಿದ್ದರು. ವಿಶ್ವನಾಥ್ ಪಕ್ಕಾ ವೃತ್ತಿಪರ ರಾಜಕಾರಣಿ. ವಿಶ್ವನಾಥ್ ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶಿಸಿದ್ದರು.

ಅವರಿಗೆ ಹಲವಾರು ಅಂಶಗಳು ಪ್ಲಸ್ ಪಾಯಿಂಟ್ ಆಗಿದೆ. ಸಿಎಂ ತವರು ಜಿಲ್ಲೆಯಾದ್ದರಿಂದ ಸ್ವಯಂ ಸಿದ್ದರಾಮಯ್ಯ ಅವರ ಗೆಲುವಿಗೆ ಪಣ ತೊಟ್ಟಿದ್ದಾರೆ. ವಿಶ್ವನಾಥ್ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂಬ ಟೀಕೆ ಅವರಿಗೆ ಮೈನಸ್ ಪಾಯಿಂಟ್ ಆಗಿ ಪರಿಣಮಿಸಿದೆ. ಎಂಪಿಯಾದ ಮೇಲೆ ಅವರು ಜನಸಾಮಾನ್ಯರ ಕೈಗೆ ಸಿಗುತ್ತಿಲ್ಲ ಎಂಬ ದೂರು ಕೂಡ ಕೇಳಿಬಂದಿದೆ. ಬಿಜೆಪಿ ಅಭ್ಯರ್ಥಿ ರಾಜಕೀಯಕ್ಕೆ ಹೊಸಬರು.

PR
PR
ತಂದೆಯ ಹಾದಿಯಲ್ಲೇ ಸಾಗಿದ ಪ್ರತಾಪ್ ಸಿಂಹ ಆರ್‌ಎಸ್‌ಎಸ್ ಪರ ಬರಹಗಳಿಂದ ಮತ್ತು ಹಿಂದು ಪರ ನಿಲುವಿನಿಂದ ಟಿಕೆಟ್ ದೊರಕಿಸಿಕೊಟ್ಟಿದೆ. ಪ್ರತಾಪ್ ಹೊರಗಿನ ಅಭ್ಯರ್ಥಿ. ಮೈಸೂರು ಟಿಕೆಟ್ ಆಕಾಂಕ್ಷಿಯಾಗಿದ್ದ ವಿಜಯಶಂಕರ್ ಅವರನ್ನು ಹಾಸನಕ್ಕೆ ಕಳಿಸಿದರು ಎಂಬ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ. ಜೆಡಿಎಸ್ ಅಭ್ಯರ್ಥಿಯಾದ ನಿವೃತ್ತ ನ್ಯಾಯಾಧೀಶ ಚಂದ್ರಶೇಖರಯ್ಯ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರೂ ಅದು ಸಾಧ್ಯವಾಗದೇ ಮೈಸೂರಿನಲ್ಲಿ ಅಖಾಡಕ್ಕಿಳಿದಿದ್ದಾರೆ. ಒಕ್ಕಲಿಗರ ಮತಗಳನ್ನು ಇವರು ನೆಚ್ಚಿಕೊಂಡಿದ್ದಾರೆ. ಮೈಸೂರಿಗೆ ಜಾಫರ್ ಷರೀಫ್ ಅವರನ್ನು ಕರೆತರುವ ಪ್ರಯತ್ನ ವಿಫಲವಾದ ನಂತರ ಕೊನೆ ಗಳಿಗೆಯಲ್ಲಿ ಚಂದ್ರಶೇಖರಯ್ಯ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದೆ.

ಮೈಸೂರಿನಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಕಾವೇರಿ ಕೊಳ್ಳಕ್ಕೆ ಹತ್ತಿರವೇ ಇರುವ ಮೈಸೂರಿನ ಜನತೆಗೆ ಕಾವೇರಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂಬ ಕೂಗು ಕೇಳಿಬಂದಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿಲ್ಲ ಎಂಬ ದೂರೂ ಕೇಳಿಬಂದಿದೆ. ಕೊಡಗಿನಲ್ಲಿ ಕಾಫಿ ಪ್ರಮುಖ ಬೆಳೆ. ಆದರೆ ಆನೆಗಳ ಹಾವಳಿಯಿಂದ ಜನರ ಸಂಕಷ್ಟ ಮೇರೆ ಮೀರಿದೆ. ಕೊಡಗಿನ ವಿರುದ್ಧ ಕೇಂದ್ರ ಹಾಗು ರಾಜ್ಯಸರ್ಕಾರ ಮಲತಾಯಿ ಧೋರಣೆ ತಾಳಿದೆ ಎಂಬ ಭಾವನೆ ಕೊಡಗಿನ ಜನರಲ್ಲಿದೆ. ಮೈಸೂರಿನಿಂದ ಅತಿ ಹೆಚ್ಚು ಬಾರಿಗೆ ಆಯ್ಕೆಯಾದ ದಾಖಲೆ ಇರುವುದು ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್. 1996ರಿಂದ ಮತದಾರ ಎರಡು ಬಾರಿ ಕಾಂಗ್ರೆಸ್ ಪಕ್ಷವನ್ನು ಆರಿಸಿದ್ದರೆ, ಒಂದು ಬಾರಿ ಬಿಜೆಪಿಯನ್ನು ಆರಿಸಿದೆ.

ವೆಬ್ದುನಿಯಾವನ್ನು ಓದಿ