ಯಕ್ಷಗಾನ ಅಕಾಡೆಮಿ ಸ್ಥಾಪನೆಗೆ ಚಾಲನೆ

ಸೋಮವಾರ, 24 ಡಿಸೆಂಬರ್ 2007 (19:10 IST)
ಯಕ್ಷಗಾನ ಕಲಾವಿದರ ದಶಕಗಳ ಬೇಡಿಕೆ ಕೊನೆಗೂ ಫಲಿಸಿದೆ. ಪ್ರತ್ಯೇಕ ಯಕ್ಷಗಾನ ಅಕಾಡೆಮಿ ಸ್ಥಾಪನೆಗೆ ಸರ್ಕಾರ ಅಂತಿಮ ಮುದ್ರೆಯನ್ನು ಹಾಕಿದ್ದು, ಮುಂದಿನ ಏಪ್ರಿ‌ಲ್‌ನಲ್ಲಿ ಅದು ಕಾರ್ಯಾರಂಭ ಮಾಡಲಿದೆ ಎಂದು ತಿಳಿದುಬಂದಿದೆ.

ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಆಡಳಿತ ಮಂಡಳಿಯ ಮೂರು ವರ್ಷಗಳ ಅವಧಿಯು ಬರುವ ಮಾರ್ಚ್ ಅಂತ್ಯಕ್ಕೆ ಕೊನೆಗೊಳ್ಳಲಿದೆ. ನಂತರ ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಜಾನಪದ ಅಕಾಡೆಮಿಯನ್ನು ಪ್ರತ್ಯೇಕಿಸಲಾಗುವುದು ಎಂದು ಸುದ್ದಿಮೂಲಗಳು ತಿಳಿಸಿವೆ.

ಕರಾವಳಿ ಪ್ರದೇಶ ಹೊರತುಪಡಿಸಿ ರಾಜ್ಯದ ಇನ್ನುಳಿದ ಭಾಗಗಳಲ್ಲೂ ಜನಪ್ರಿಯವಾಗಿರುವ ಸಣ್ಣಾಟ ಮತ್ತು ದೊಡ್ಡಾಟ ಕಲಾ ಪ್ರಕಾರಗಳನ್ನೂ ಈ ನೂತನ ಯಕ್ಷಗಾನ ಅಕಾಡೆಮಿಯ ವ್ಯಾಪ್ತಿಗೆ ತರಲು ತೀರ್ಮಾನಿಸಲಾಗಿದೆ.

ಪ್ರಸ್ತುತ ಇರುವ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಲ್ಲಿ ಯಕ್ಷಗಾನ ಕಲೆ ಮತ್ತು ಕಲಾವಿದರಿಗೆ ಪ್ರಾಧಾನ್ಯತೆ ನೀಡುತ್ತಿಲ್ಲ, ಮಲತಾಯಿ ಧೋರಣೆ ಅನುಸರಿಸಲಾಗುತ್ತದೆ ಎಂಬ ಅಸಮಾಧಾನಗಳು ಆಗಾಗ ಕೇಳಿಬರುತ್ತಿದ್ದವು.

ಈ ಧೋರಣೆಗೆ ದನಿಗೂಡಿಸಿದ ಕೆರೆಮನೆ ಶಂಭು ಹೆಗಡೆ, ಶೇಣೆ ಗೋಪಾಲಕೃಷ್ಣ ಭಟ್, ಕುಂಬ್ಳೆ ಸುಂದರರಾವ್ ಸೇರಿದಂತೆ ಅನೇಕ ಹಿರಿಯ ಯಕ್ಷಗಾನ ಕಲಾವಿದರು, ವಿದ್ವಾಂಸರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಅವರ ಬೇಡಿಕೆಗೆ ಸಂದ ಜಯ ಇದಾಗಿದೆ.

ವೆಬ್ದುನಿಯಾವನ್ನು ಓದಿ