ಯಡಿಯೂರಪ್ಪಗಿಂತ ನನಗೆ ಪಕ್ಷ ಮುಖ್ಯ: ಡಿವಿಎಸ್

ಭಾನುವಾರ, 30 ಜೂನ್ 2013 (10:19 IST)
PR
ನಾನು ಯಾರ ಪರವಾಗಿಯೂ ಬ್ಯಾಟಿಂಗ್‌ ಮಾಡುತ್ತಿಲ್ಲ. ಪಕ್ಷದ ಪರವಾಗಿ ಬ್ಯಾಟಿಂಗ್‌ ಮಾಡುತ್ತಿದ್ದೇನೆ' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಡಿ.ವಿ.ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಪಕ್ಷದ ರಾಜ್ಯಾಧ್ಯಕ್ಷನಾಗಿದ್ದಾಗ ಮತ್ತು ಮುಖ್ಯಮಂತ್ರಿಯಾಗಿದ್ದಾಗ ಪಕ್ಷದ ಪರವಾಗಿ ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಮಾಡಿದ್ದೇನೆ. ಈಗಲೂ ಅದೇ ಕೆಲಸ ಮಾಡುತ್ತಿದ್ದೇನೆ ಎಂದರು.

ಯಡಿಯೂರಪ್ಪ ಅವರನ್ನು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲವಿದೆ. ಇದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಯಡಿಯೂರಪ್ಪ ಅವರು ಬೇಕೇ ಅಥವಾ ಬೇಡವೇ ಎಂಬ ಬಗ್ಗೆ ರಾಜ್ಯ ಘಟಕ ಹಾಗೂ ರಾಷ್ಟ್ರೀಯ ಘಟಕಗಳು ಆದಷ್ಟು ಬೇಗ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.

ಸಂಸದ ಡಿ.ಬಿ.ಚಂದ್ರೇಗೌಡ ಅವರ ನಿವಾಸದಲ್ಲಿ ನಡೆದ ಸಭೆಗೆ ರಾಜ್ಯಾಧಕ್ಷ ಪ್ರಹ್ಲಾದ್‌ ಜೋಶಿ ಅವರ ಜತೆ ಚರ್ಚಿಸಿಯೇ ತೆರಳಿದ್ದೆ. ಯಡಿಯೂರಪ್ಪ ಅವರನ್ನು ಕರೆತರುವ ಸಂಬಂಧ ರಾಜ್ಯ ಘಟಕದಲ್ಲಿ ಚರ್ಚೆಯಾಗದೆ ವರಿಷ್ಠರ ಬಳಿ ನಿಯೋಗ ಕೊಂಡೊಯ್ಯುವುದು ಬೇಡ ಎಂಬ ಸಲಹೆಯನ್ನು ಆ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರಿಗೆ ನೀಡಿದ್ದೆ ಎಂದು ಗೌಡರು ಸಮಜಾಯಿಷಿ ನೀಡಿದರು.

ವೆಬ್ದುನಿಯಾವನ್ನು ಓದಿ