ಯಡಿಯೂರಪ್ಪ ಮನೆಯಲ್ಲಿ ಹಣದ ರಾಶಿ ವದಂತಿ; ಲಾಠಿ ಪ್ರಹಾರ

ಮಂಗಳವಾರ, 27 ಸೆಪ್ಟಂಬರ್ 2011 (12:20 IST)
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೇರಿದ ತಾಲೂಕಿನ ಸಿದ್ದನಪುರ ಸಮೀಪದ ಐಶಾರಾಮಿ ತೋಟದ ಮನೆಯಲ್ಲಿ ಭಾರೀ ಪ್ರಮಾಣದಲ್ಲಿ ಹಣ ಸಂಗ್ರಹಿಸಿಟ್ಟಿದ್ದು, ಅದನ್ನು ಬೇರೆಡೆಗೆ ಸಾಗಿಸುತ್ತಿದ್ದಾರೆ ಎನ್ನುವ ಗಾಳಿಸುದ್ದಿಯಿಂದ ಮನೆಯ ಬಳಿ ಜನರು ಜಮಾಯಿಸಿದ್ದರಿಂದ ಗುಂಪನ್ನು ಚದುರಿಸಲು ಪೊಲೀರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಭಾನುವಾರ ತಡರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಬಿ.ಎಸ್.ಯಡಿಯೂರಪ್ಪ ತೋಟದ ಮನೆಯಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸಿದ್ದು, ಸೋಮವಾರ ಲೋಕಾಯುಕ್ತ ದಾಳಿ ನಡೆಯುವ ಹಿನ್ನೆಲೆಯಲ್ಲಿ ಅದನ್ನು ಬೇರೆಡೆಗೆ ಸಾಗಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನು ಸುದ್ದಿ ನಗರದಲ್ಲಿ ದಟ್ಟವಾಗಿ ಹಬ್ಬಿತ್ತು. ಈ ನಿಟ್ಟಿನಲ್ಲಿ ಜನರು ತಂಡೋಪ ತಂಡವಾಗಿ ತೋಟದ ಮನೆಯ ಬಳಿ ಜಮಾಯಿಸಿದ್ದರು.

ಹಣ ಸಾಗಣೆ ವದಂತಿ ಆಧಾರ ರಹಿತ ಎಂದು ತೋಟದ ಸಿಬ್ಬಂದಿ ಜನರನ್ನು ವಾಪಸ್ ಕಳುಹಿಸಿದರು. ಯಡಿಯೂರಪ್ಪ ಕುಟುಂಬದವರೂ ಇದೊಂದು ಸುಳ್ಳು ಸುದ್ದಿ ನಂಬಬೇಡಿ ಎಂದು ಮನವಿ ಮಾಡಿದರು. ಆದರೂ ಜನದಟ್ಟಣೆ ಹೆಚ್ಚಾದಂತೆ ಎಲ್ಲರೂ ನಿರುತ್ತರಾದರು.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ತೋಟದ ಮನೆ ಸುತ್ತಮುತ್ತ ಜಮಾಯಿಸಿದ್ದ ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಲೋಕಾಯುಕ್ತ, ಸಿಬಿಐ, ಆದಾಯ ತೆರಿಗೆ ಅಧಿಕಾರಿಗಳಿಂದ ಯಾವುದೇ ದಾಳಿ ನಡೆದಿಲ್ಲ ಎಂದು ಸ್ಥಳೀಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ವೈಭವದ ಮನೆ?
ಸಿದ್ದನಪುರ ಸಮೀಪದ ಯಡಿಯೂರಪ್ಪನವರ ತೋಟದ ಮನೆ ಅತ್ಯಂತ ವೈಭವದಿಂದ ಕೂಡಿದೆ. ಅಲ್ಲಿ ಏನೆಲ್ಲ ಇರಬಹುದು ಎನ್ನುವುದು ಎಲ್ಲರ ಕುತೂಹಲ. ಸುದ್ದಿಗಾರರು, ಪೊಲೀಸರು ಸೇರಿದಂತೆ ಯಾರಿಗೂ ಮನೆ ಒಳಗಿನ ವೈಭವದ ಬಗ್ಗೆ ನಿಖರ ಮಾಹಿತಿ ಇಲ್ಲ.

ಅಲ್ಲದೆ ಮನೆಗೆ ಅತ್ಯಾಧುನಿಕ ಸೌಲಭ್ಯ ಅಳವಡಿಸಿದ್ದು, ಯಡಿಯೂರಪ್ಪನವರು ಬೆರಳು ಇಟ್ಟರೆ ಮಾತ್ರ ಬಾಗಿಲು ತೆರೆಯುತ್ತದೆ. ಅಡುಗೆ ಕೋಣೆ, ಸ್ನಾನದ ಗೃಹ ಎಲ್ಲವೂ ಉನ್ನತ ತಂತ್ರಜ್ಞಾನದಿಂದ ಕೂಡಿದೆ. ಸುಸಜ್ಜಿತ ಈಜುಕೊಳ ಹೊಂದಿರುವ ಮನೆ ಎಷ್ಟು ವಿಸ್ತೀರ್ಣದಲ್ಲಿದೆ ಎನ್ನುವುದು ಯಾರಿಗೂ ಮಾಹಿತಿ ಇಲ್ಲ.

ವೆಬ್ದುನಿಯಾವನ್ನು ಓದಿ