ಯುಗಾದಿ ಆಚರಿಸಿದ ರಾಜಕಾರಣಿಗಳು

ಸೋಮವಾರ, 7 ಏಪ್ರಿಲ್ 2008 (18:08 IST)
PTI
ಚುನಾವಣೆ ಸಮೀಪಿಸುತ್ತಿರುವುದರಿಂದ ಈ ಬಾರಿಯ ಯುಗಾದಿ ಹಲವರಿಗೆ ಬೇವು ಬೆಲ್ಲದ ಮಿಶ್ರಣ ನೀಡಿರಬಹುದು. ಆದರೆ ರಾಜಕಾರಣಿಗಳಿಗೆ ಯುಗಾದಿ ಶುಭಾಶಯಗಳಿಗಿಂತಲೂ ಟಿಕೇಟ್ ನೀಡಿ ಎನ್ನುವ ಮಾತೇ ಮಂತ್ರವಾಗಿತ್ತು.

ಸೋಮವಾರ ಕಾಂಗ್ರೆಸ್ ಮುಖಂಡರು ನಿವಾಸದಲ್ಲಿ ಇದೇ ರೀತಿಯ ವಾತಾವರಣ ಕಂಡು ಬಂದಿತ್ತು. ಹಲವರು ಶುಭಾಶಯ ಪತ್ರದ ಜೊತೆಗೆ ಟಿಕೇಟ್ ನೀಡಿ ಎಂಬ ಪತ್ರವು ಕೊಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಮನೆಯಲ್ಲಿ ಜಮಾಯಿಸಿದ್ದ ನೂರಾರು ಕಾರ್ಯಕರ್ತರು ತಮ್ಮ ಚುನಾವಣಾ ಬೇಡಿಕೆಯೊಂದಿಗೆ ಶುಭಾಶಯ ಹೇಳುತ್ತಿದ್ದರು.

ಇನ್ನು ಬಿಜೆಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದಲ್ಲಿ ಪಕ್ಷದ ಅನೇಕ ಮುಖಂಡರು ಹಾಜರಿದ್ದರು. ಎಲ್ಲರಿಗೂ ಬೇವು ಬೆಲ್ಲ ನೀಡಿದ ಯಡಿಯೂರಪ್ಪ, ಯುಗಾದಿ ಶುಭಾಶಯಗಳೊಂದಿಗೆ ಒಂದೇ ಪಕ್ಷಕ್ಕೆ ಮತ ನೀಡಬೇಕೆಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಯುಗಾದಿ ದಿನದಂದು ಚುನಾವಣಾ ಕಾರ್ಯಗಳನ್ನು ಬದಿಗಿಟ್ಟು ತಮ್ಮ ನಿವಾಸದಲ್ಲಿ ಕುಟುಂಬದವರೊಂದಿಗೆ ಅದ್ದೂರಿಯಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಬ್ಬವನ್ನು ಆಚರಿಸಿಕೊಂಡರು. ಒಟ್ಟಿನಲ್ಲಿ ಈ ಬಾರಿ ಯುಗಾದಿ ಯಾವ ರಾಜಕೀಯ ಪಕ್ಷಗಳಿಗೆಲ್ಲಾ ಬೇವು ಮತ್ತು ಬೆಲ್ಲವನ್ನು ನೀಡಲಿದೆ ಎಂಬುದನ್ನು ಮತದಾರರು ತೀರ್ಮಾನಿಸಬೇಕಿದೆ.

ವೆಬ್ದುನಿಯಾವನ್ನು ಓದಿ