ರಾಮನಗರದಲ್ಲಾಯ್ತು, ಮಂಡ್ಯದಲ್ಲಿ ಕುಮಾರಸ್ವಾಮಿ ಮತ್ತೆ ಹರಿಸಿದರು ಕಣ್ಣೀರಧಾರೆ

ಸೋಮವಾರ, 24 ಮಾರ್ಚ್ 2014 (17:40 IST)
PR
PR
ಮಂಡ್ಯ: ರಾಮನಗರದಲ್ಲಿ ಪಕ್ಷದ ಕಾರ್ಯಕರ್ತರ ಎದುರು ಭಾವುಕರಾಗಿ ಕಣ್ಣೀರಧಾರೆ ಹರಿಸಿದ್ದ ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಸಕ್ಕರೆ ನಾಡು ಮಂಡ್ಯದಲ್ಲೂ ಕೂಡ ಕಣ್ಣೀರ ದಾರೆಯನ್ನು ಸುರಿಸಿ, ಮತದಾರರ ಸಹಾನುಭೂತಿಯನ್ನು ಗಳಿಸುವ ಪ್ರಯತ್ನ ಮಾಡಿದರು.ರಾಮನಗರದಲ್ಲಿ ತಮ್ಮ ಪತ್ನಿ ಅನಿತಾಕುಮಾರಸ್ವಾಮಿಯನ್ನು ಸೋಲಿಸಿದ್ದಕ್ಕೆ ಗದ್ಗದಿತರಾಗಿ ಕಣ್ಣೀರು ಹರಿಸಿದ್ದರು. ಮಂಡ್ಯ ಅಭ್ಯರ್ಥಿ ಪುಟ್ಟರಾಜು ನಾಮಪತ್ರ ಸಲ್ಲಿಸಿದ ನಂತರ ತೆರೆದವಾಹನದಲ್ಲಿ ಆಗಮಿಸಿದ ಕುಮಾರಸ್ವಾಮಿ ಕಾರ್ಯಕರ್ತರನ್ನು ಕುರಿತು ಭಾವುಕರಾಗಿ ಮಾತನಾಡಿದರು. ತಮ್ಮ ಪಕ್ಷದ ನಾಯಕರು ಹಣ ಮಾಡಿದ್ದಾರೆಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ನನ್ನ ವಿರುದ್ಧವೂ ಅಕ್ರಮದ ಆರೋಪ ಮಾಡಿದ್ದಾರೆ. ನರೇಂದ್ರ ಮೋದಿ, ಕೇಜ್ರಿವಾಲ್ ಪ್ರಚಾರಕ್ಕೆ ಖರ್ಚು ಮಾಡುತ್ತಿರುವ ಹಣದ ಬಗ್ಗೆ ಎಚ್‌ಡಿಕೆ ಪ್ರಶ್ನೆ ಮಾಡಿದರು.

ನಮ್ಮ ಆರ್ಥಿಕ ಪರಿಸ್ಥಿತಿ ಹೀನಾಯವಾಗಿದೆ. ಇತರರು ಪ್ರಚಾರಕ್ಕೆ ಕೋಟ್ಯಂತರ ರೂ. ಹಣವನ್ನು ವ್ಯಯಿಸುತ್ತಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಕೋಟ್ಯಂತರ ರೂ. ಹಣವನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ. ವೀರಪ್ಪ ಮೊಯ್ಲಿ ಕೂಡ ರಿಲಯನ್ಸ್‌ಮುಖೇಶ್ ಅಂಬಾನಿ ಜತೆ ಕೈಗೂಡಿಸಿ ಹಣ ಮಾಡಿದ ಆರೋಪ ಹೊತ್ತಿದ್ದಾರೆ. ನಮಗೆ ಹಣ ಎಲ್ಲಿ ಬರುತ್ತದೆ. ನಾವು ಅಕ್ರಮವಾಗಿ ಹಣ ಸಂಪಾದಿಸಿದ್ದೇವೆ ಎಂಬ ಆರೋಪ ಮಾಡ್ತಿದ್ದಾರೆ. ಇವತ್ತು ಪಕ್ಷ ಉತ್ತಮಸ್ಥಿತಿಯಲ್ಲಿ ಇಲ್ಲ. ಪಕ್ಷದ ಆರ್ಥಿಕ ಪರಿಸ್ಥಿತಿ ಕೆಟ್ಟಿದೆ. ಆದರೆ ನೀವುಗಳು ನಮಗೆ ಬೆಂಬಲವಾಗಿ ಇರಬೇಕು. ವಿರೋಧಪಕ್ಷಗಳು ನಮ್ಮ ವಿರುದ್ಧ ಆರೋಪ ಮಾಡುತ್ತಿರುವುದು ತಮಗೆ ಬೇಸರ ತಂದಿದೆ ಎಂದು ಕುಮಾರಸ್ವಾಮಿ ಗಳಗಳನೇ ಅತ್ತು ಕಣ್ಣೀರಧಾರೆ ಹರಿಸಿದರು.

ವೆಬ್ದುನಿಯಾವನ್ನು ಓದಿ