ವಿರೋಧ ಪಕ್ಷಗಳ ನಾಯಕರಿಗೆ ಅಧಿಕಾರಿಗಳ ಸಭೆ ಕರೆಯುವ ಯಾವುದೇ ಅಧಿಕಾರ ಇಲ್ಲ ಎಂದು ವಾರ್ತಾ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಲೋಕಸಭಾ ಸದಸ್ಯ ಡಿ.ಬಿ.ಚಂದ್ರೇಗೌಡ ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕರು ಅಧಿಕಾರಿಗಳೊಂದಿಗೆ ಸಭೆ ನಡೆಸಿರುವುದನ್ನು ವಿರೋಧಿಸಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಗಳು, ವಿರೋಧ ಪಕ್ಷಗಳ ನಾಯಕರಿಗೆ ಮಾಹಿತಿ ಪಡೆಯುವ ಹಕ್ಕಿದೆ. ಆದರೆ ಅದನ್ನು ಅಧಿಕಾರಿಗಳ ಸಭೆ ನಡೆಸಿ ಪಡೆಯುವ ಹಾಗಿಲ್ಲ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕರಿಗೆ ಅಧಿಕಾರಿಗಳ ಸಭೆ ನಡೆಸುವ ಅಧಿಕಾರ ಸಂವಿಧಾನದ ಪ್ರಕಾರವಾಗಲಿ, ಕಾನೂನು ಪ್ರಕಾರವಾಗಲಿ ಹಾಗೂ ಹಿಂದಿನ ಸಂಪ್ರದಾಯದ ಪ್ರಕಾರವಾಗಲಿ ಇಲ್ಲ ಎಂದು ಅವರುಗಳು ಪ್ರತಿಪಾದಿಸಿದ್ದಾರೆ.
ಮಾಹಿತಿ ಪಡೆಯಲು ಅಧಿಕಾರಿಗಳ ಸಭೆ ಕರೆದಾಗ ಅಧಿಕಾರಿಗಳು ಹಾಜರಾಗದೆ ಇದ್ದರೆ ಅದು ವಿರೋಧ ಪಕ್ಷದ ನಾಯಕರಿಗೆ ಆದ ಮುಖಭಂಗವೇ ಹೊರತು ಸರ್ಕಾರಕ್ಕಲ್ಲ ಎಂದು ಅವರುಗಳು ಕಿಡಿಕಾರಿದ್ದಾರೆ.