ಸಿದ್ದರಾಮಯ್ಯ ಸತ್ಯ ಮರೆ ಮಾಚುತ್ತಿದ್ದಾರೆ: ಹೆಚ್ಡಿಕೆ

ಮಂಗಳವಾರ, 26 ಫೆಬ್ರವರಿ 2013 (12:04 IST)
PR
PR
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಜೆಡಿಎಸ್ ವರಿಷ್ಟ ದೇವೇಗೌಡರು ತಾವು ಮುಖ್ಯಮಂತ್ರಿಯಾಗುವ ಆವಕಾಶವನ್ನು ಎರಡು ಬಾರಿ ತಪ್ಪಿಸಿದರೆಂದು ಹೇಳುತ್ತಾ ಸತ್ಯ ಮರೆ ಮಾಚುತ್ತಿದ್ದಾರೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ, 1997 ರಲ್ಲಿ ಸಿದ್ದರಾಮಯ್ಯನವರನ್ನು ಬೆಂಬಲಿಸಲು ಶಾಸಕರೇ ಸಿದ್ದರಿಲ್ಲದಿದ್ದಾಗ ಅವರನ್ನು ಹೇಗೆ ಮುಖ್ಯಮಂತ್ರಿ ಮಾಡಲು ಸಾಧ್ಯವಿತ್ತು ಎಂದು ಪ್ರಶ್ನಿಸಿದ್ದಾರೆ.

ಮಹಾರಾಜ ಕಾಲೇಜು ಮೈದಾನದಲ್ಲಿ ಸೋಮವಾರ ರಾಜ್ಯ ಗೃಹಮಂಡಳಿ ಮಾಜಿ ಅಧ್ಯಕ್ಷ ಜಿ.ಟಿ. ದೇವೇಗೌಡ ಜೆಡಿಎಸ್‌ ಸೇರ್ಪಡೆ ಅಂಗವಾಗಿ ಆಯೋಜಿಸಿದ್ದ ಮರಳಿ ಮನೆಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ನಲ್ಲಿದ್ದು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಸಿದ್ದರಾಮಯ್ಯನವರ ಕನಸು ಈಡೇರುವುದಿಲ್ಲವೆಂದ ಕುಮಾರಸ್ವಾಮಿ, ಜೆಡಿಎಸ್‌ನಲ್ಲಿದ್ದಾಗ ತಮ್ಮನ್ನು ಮುಖ್ಯಮಂತ್ರಿ ಮಾಡಲಿಲ್ಲವೆಂದು ದೇವೇಗೌಡರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿಸಿದ್ದರು ಎಂದು ದೂರಿದರು.

ತಮಗೆ ಶಾಸಕರ ಬೆಂಬಲವಿತ್ತು ಎಂದು ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯ ತಮ್ಮ ಕುರುಬ ಸಮುದಾಯದ ಎಷ್ಟು ಮಂದಿಯನ್ನು ಶಾಸಕರನ್ನಾಗಿಸಿದ್ದಾರೆ ಹೇಳಲಿ ಎಂದು ಸವಾಲು ಹಾಕಿದ ಅವರು, ಜೆಡಿಎಸ್ ಕುರಿತು ಕುರುಬ ಸಮುದಾಯದಲ್ಲಿ ತಪ್ಪು ಅಭಿಪ್ರಾಯ ಮೂಡಿಸುವುದನ್ನು ಸಿದ್ದರಾಮಯ್ಯ ಬಿಡಲಿ. ಪ್ರಸ್ತುತ ಜೆಡಿಎಸ್‌ನಲ್ಲಿ ಇಬ್ಬರು ಕುರುಬ ಶಾಸಕರಿದ್ದು, ಮುಂಬರುವ ಚುನಾವಣೆ ನಂತರ ಈ ಸಂಖ್ಯೆ ಹತ್ತರಿಂದ ಹದಿನೈದಕ್ಕೆ ಏರಲಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ