ಸ್ಥಾನಮಾನ ಕೇಳೋರು ಪ್ರಚಾರಕ್ಕೆ ಬರ್ತಿಲ್ಲ: ಡಿಕೆಶಿ

ಬುಧವಾರ, 24 ಡಿಸೆಂಬರ್ 2008 (14:19 IST)
NRB
ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬರಲು ಕುಂಟುನೆಪ ಹೇಳುತ್ತಿರುವವರ ವಿರುದ್ಧ ಇಂದಲ್ಲ ನಾಳೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಖಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಎಚ್ಚರಿಸಿದ್ದಾರೆ.

ಅರಬಾವಿ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾರು. "ಅಧಿಕಾರ ಅನುಭವಿಸಲು, ಸ್ಥಾನಮಾನ ಕಾಪಾಡಿಕೊಳ್ಳಲು ಪಕ್ಷ ಬೇಕು. ಆದರೆ, ಪಕ್ಷಕ್ಕಾಗಿ ದುಡಿಯಲು ಆಗುವುದಿಲ್ಲ ಅಂದರೆ ಹೇಗೆ?" ಎಂದು ಪ್ರಶ್ನಿಸಿದರು.

"ಒಂದಿಬ್ಬರು ಕಾಂಗ್ರೆಸ್ಸಿಗರು ಹೀಗೆ ಮಾಡಿದ್ದಾರೆ. ತಮ್ಮ ಸಹೋದರನಿಗೆ ಅಧಿಕಾರ ಸಿಗಲಿ ಎಂದೇನಾದರೂ ಅವರು ಈ ರೀತಿ ಮಾಡಿದರೇ ಎಂಬುದು ಈಗ ಪ್ರಶ್ನೆಯಾಗಿದೆ. ಅದು ಮುಂದಿನ ದಿನಗಳಲ್ಲಿ ಗೊತ್ತಾಗಲಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವುದು ನಿಶ್ಚಿತ" ಎಂದು ಎಚ್ಚರಿಕೆ ನೀಡಿದರು.

ಬೆಳಗಾವಿ ಜಿಲ್ಲೆ ಅರಬಾವಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ವಿವೇಕರಾವ್ ಪಾಟೀಲ್ ಪರ ಮೂಡಲಗಿ ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರಚಾರ ಸಭೆಯ ವೇಳೆ ಅವರು ಈ ಎಚ್ಚರಿಕೆ ನೀಡಿದರು.

ವೆಬ್ದುನಿಯಾವನ್ನು ಓದಿ