ಹೋಗೋರೆಲ್ಲ ಹೋಗ್ಲಿ, ಸರ್ಕಾರಕ್ಕೇನ್ ತೊಂದ್ರೆ ಇಲ್ಲ: ಶೆಟ್ಟರ್

ಶನಿವಾರ, 23 ಫೆಬ್ರವರಿ 2013 (12:53 IST)
PR
PR
ಹಲವು ಬಿಜೆಪಿ ಸಚಿವ, ಶಾಸಕರು ತಮ್ಮ ಶಾಸಕತ್ವ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವವನ್ನು ದಿನಂಪ್ರತಿ ತೊರೆಯುತ್ತಿದ್ದರೂ ಇದಕ್ಕೆ ಕೂಲಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಹೋಗೋರೆಲ್ಲ ಹೋಗ್ಲಿ, ಈಗಲೂ ತಮ್ಮ ಸರ್ಕಾರಕ್ಕೆ ಬಹುಮತವಿದ್ದು ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರಸಕ್ತ ನಡೆಯುತ್ತಿರುವ ರಾಜಕೀಯ ವಿದ್ಯಾಮಾನಗಳ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಚಿತಾವಣೆಯಿಂದ ಕೆಲ ಶಾಸಕರು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ ಎಂದರಲ್ಲದೆ ಇದುವರೆಗೂ ಬಿಜೆಪಿಯಿಂದ ಅಧಿಕಾರ ಅನುಭವಿಸಿ ಈಗ ಪಕ್ಷ ತೊರೆಯುತ್ತಿರುವ ಸಚಿವರುಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಪ್ರತಿಕ್ರಿಯೆ: ಜಗದೀಶ್ ಶೆಟ್ಟರ್‌ರವರ ಹೇಳಿಕೆಗೆ ಕೋಲಾರದಲ್ಲಿ ಪ್ರತಿಕ್ರಿಯೆ ನೀಡಿರುವ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನಾವು ಯಾವ ಬಿಜೆಪಿ ಶಾಸಕರಿಗೂ ಪಕ್ಷಕ್ಕೆ ಬರುವಂತೆ ಕರೆದಿಲ್ಲ. ಬಿಜೆಪಿಯಲ್ಲಿ ಭವಿಷ್ಯವಿಲ್ಲವೆಂಬ ಕಾರಣಕ್ಕೆ ಅವರುಗಳೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಯಾವುದೇ ಕುದುರೆ ವ್ಯಾಪಾರದಲ್ಲಿ ತೊಡಗಿಲ್ಲ ಎಂದ ಸಿದ್ದರಾಮಯ್ಯ, ಇಂತಹ ಕೆಲಸಗಳೇನಿದ್ದರು ಬಿಜೆಪಿಯವರಿಗೆ ಸೀಮಿತ ಎಂದು ವ್ಯಂಗ್ಯವಾಡಿದ್ದಾರೆ.

ವೆಬ್ದುನಿಯಾವನ್ನು ಓದಿ