ಹಣದಾಸೆಗಾಗಿ ಎರಡನೇ ಮದುವೆ, ಪತ್ನಿಗೆ ಪಿಎಸ್‌ಐ ಕಿರುಕುಳ

ಸೋಮವಾರ, 1 ಫೆಬ್ರವರಿ 2016 (16:38 IST)
ಸಿರುಗುಪ್ಪ ಪಟ್ಟಣ ಠಾಣೆ ಪಿಎಸ್‌ಐ ರಘುವಿನ ಕಿರುಕುಳ ಸಹಿಸದೇ ಅವರ ಪತ್ನಿ ಚಂದ್ರಕಲಾ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಂಭವಿಸಿದೆ. ಮೊದಲನೇ ವಿವಾಹವಾಗಿ ಪತ್ನಿಯನ್ನು ತ್ಯಜಿಸಿದ್ದ ರಘು ಅದನ್ನು ಮುಚ್ಚಿಟ್ಟು  ಚಂದ್ರಕಲಾರನ್ನು ಎರಡನೇ ಮದುವೆಯಾಗಿದ್ದಾರೆಂದು ಚಂದ್ರಕಲಾ ಆರೋಪಿಸಿದ್ದಾರೆ. 

ರಘು ಚಂದ್ರಕಲಾಗೆ ನಿರಂತರ ಕಿರುಕುಳ ನೀಡುತ್ತಿದ್ದರು. ರಘುವಿನ ನಿರಂತರ ಕಿರುಕುಳದಿಂದ ಬೇಸತ್ತ ಚಂದ್ರಕಲಾ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು. ರಘು ತನ್ನ  ಮಗುವನ್ನೂ ಸರಿಯಾಗಿ ನೋಡಿಕೊಳ್ಳುತ್ತಿಲ್ಲವೆಂದು ಚಂದ್ರಕಲಾ ದೂರಿದ್ದಾರೆ.  ಮದುವೆ ಸಂದರ್ಭದಲ್ಲಿ ಚಂದ್ರಕಲಾ ಮನೆಯವರು ಒಂದೂವರೆ ಎಕರೆ ಭೂಮಿ, 45 ಗ್ರಾಂ. ಚಿನ್ನವನ್ನು ಕೊಟ್ಟು ಮದುವೆ ಮಾಡಿದ್ದರು.

 ಆದರೆ ಮದುವೆಯಾದ ಮೇಲೆ ತನ್ನ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದಾರೆಂದು ಚಂದ್ರಕಲಾ ಆರೋಪಿಸಿದ್ದಾರೆ. ರಘುವಿನ ಜತೆಗೆ ತಂದೆ, ತಾಯಿ ಕೂಡ ತನಗೆ ಥಳಿಸಿದ್ದಾರೆಂದೂ ಚಂದ್ರಕಲಾ ದೂರಿನಲ್ಲಿ ಹೇಳಿದ್ದಾರೆ. ಇದಲ್ಲದೇ ತಮಗೆ ಜೀವಬೆದರಿಕೆ ಹಾಕಿದ್ದಾರೆಂದೂ ಚಂದ್ರಕಲಾ ತಂದೆ ತಿಳಿಸಿದ್ದಾರೆ. ಈ ಕುರಿತು ಬಳ್ಳಾರಿ ವರಿಷ್ಠಾಧಿಕಾರಿಗೆ ದೂರು ನೀಡಲು ಚಂದ್ರಕಲಾ ತಂದೆ, ತಾಯಿಗಳು ನಿರ್ಧರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ