ಪ್ರಾರ್ಥನೆ ಬರುವುದಿಲ್ಲವೆಂದು ಬಾಲಕನಿಗೆ ಹಿಗ್ಗಾಮುಗ್ಗಾ ಧಳಿಸಿದ ಚರ್ಚ್ ಫಾದರ್

ಮಂಗಳವಾರ, 3 ಮೇ 2016 (11:24 IST)
ದೇವರ ಪ್ರಾರ್ಥನೆ ಕಂಠಪಾಠ ಮಾಡಿಲ್ಲವೆಂಬ ಕಾರಣಕ್ಕೆ ಚರ್ಚ್‍ ಫಾದರ್ ಬಾಲಕನೊಬ್ಬನನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದಿದೆ. 
 
ಬಾಲಕನನ್ನು ಥಳಿಸಿದ ಆ್ಯಂಡ್ರ್ಯೂ ಡಿಕೋಸ್ತಾ, ವಿಟ್ಲದ ಪೆರುವಾಯಿಯ ಫಾತಿಮಾ ಮಾತೆ ಚರ್ಚ್‍ ಫಾದರ್ ಆಗಿದ್ದಾರೆ. ಬೇಸಿಗೆ ರಜೆ ಸಂದರ್ಭದಲ್ಲಿ ಚರ್ಚ್‌ನಲ್ಲಿ ನಡೆಯುವ ಪ್ರಾರ್ಥನಾ ತರಬೇತಿ ಶಿಬಿರಕ್ಕೆ ಬಂದಿದ್ದ ಬಾಲಕನಿಗೆ ಫಾದರ್ ಪ್ರಾರ್ಥನೆ ಹೇಳುವಂತೆ ಆದೇಶಿಸಿದ್ದಾರೆ. ಆದರೆ ಆತ ತನಗೆ ಬರುವುದಿಲ್ಲವೆಂದಿದ್ದಾರೆ. ಇದರಿಂದ ಕೋಪಗೊಂಡ ಅವರು 8ವರ್ಷದ ಬಾಲಕ ಸುನೀಲ್‌ನನ್ನು ತಮ್ಮ ಕೋಣೆಗೆ ಕರೆದೊಯ್ದು ಮನಬಂದಂತೆ ಥಳಿಸಿದ್ದಾರೆ ಮತ್ತು ಈ ವಿಷಯವನ್ನು ಯಾರ ಬಳಿಯಾದರೂ ಬಾಯ್ಬಿಟ್ಟರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬಾಲಕ ಮತ್ತು ಆತನ ಪೋಷಕರಿಗೆ ಬೆದರಿಕೆ ಒಡ್ಡಿದ್ದಾರೆ. 
 
ಬಾಲಕನ ಬೆನ್ನಿಗೆ ಬಾಸುಂಡೆಗಳು ಬಂದಿದ್ದು  ಸ್ಥಳೀಯರೋರ್ವರು ಬಾಲಕನ ಬೆನ್ನಿನ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈ ಸಂಬಂಧ ಕ್ರೈಸ್ತ ಸಂಘಟನೆಗಳು ದೂರು ದಾಖಲಿಸಿದ್ದರೂ, ಪೊಲೀಸರು ಮಾತ್ರ ಜಾಣ ಮೌನವನ್ನು ಪ್ರದರ್ಶಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   

ವೆಬ್ದುನಿಯಾವನ್ನು ಓದಿ