ಸಚಿವ ಅಂಬರೀಶ್ ವಿರುದ್ಧ ನಗರಸಭಾ ಸದಸ್ಯರಿಂದಲೂ ವರಿಷ್ಠರಿಗೆ ದೂರು ?!

ಸೋಮವಾರ, 12 ಅಕ್ಟೋಬರ್ 2015 (13:43 IST)
ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ ರಾಜ್ಯದ ವಸತಿ ಸಚಿವ ಅಂಬರೀಶ್ ಅವರು ಜಿಲ್ಲೆಯ ಯಾವುದೇ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಆದ್ದರಿಂದ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ನಿರ್ದೇಶನ ನೀಡಿ ಎಂದು ಕೋರಿ ಮಂಡ್ಯ ನಗರಸಭಾ ಸದಸ್ಯ ಅನಿಲ್ ಕುಮಾರ್ ಅವರು ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ದೂರು ಸಲ್ಲಿಸಿದ್ದಾರೆ ಎಂಬ ಮಾಹಿತಿ ಪ್ರಸ್ತುತ ಬಹಿರಂಗವಾಗಿದೆ. 
 
ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರು ಈ ಹಿಂದೆ ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದ ವೇಳೆ ಈ ದೂರನ್ನು ನೀಡಿದ್ದಾರೆ ಎನ್ನಲಾಗಿದ್ದು, ಸಚಿವ ಅಂಬರೀಶ್ ಅವರು ಮಂಡ್ಯ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಆದರೆ ಅವರು ಯಾವುದೇ ಸಭೆಗೆ ಹಾಜರಾಗಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆದ್ದರಿಂದ ಅವರನ್ನು ಸಂಪುಟದಿಂದಲೇ ಕೈ ಬಿಡುವಂತೆ ಕೋರಿ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 
 
ಕಾರಣವೇನು ?: ಸಚಿವ ಅಂಬರೀಶ್ ಅವರು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದರೂ ಕೂಡ ಜಿಲ್ಲೆಯ ಸಮಸ್ಯೆ ಅಥವಾ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾಗುವ ಎಲ್ಲಾ ಸಭೆಗಳಿಗೂ ಗೈರಾಗುತ್ತಿದ್ದಾರೆ. ಅಲ್ಲದೆ ಈ ಸಭೆಗಳೆಲ್ಲವೂ ಕೂಡ ಸಚಿವರ ಆಪ್ತ ಅಮರಾವತಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಸಲಾಗುತ್ತದೆ. ಈ ಸಭೆಗಳಿಂದ ಚಂದ್ರಶೇಖರ್ ಮಾತ್ರ ಲಾಭವಾಗುತ್ತಿದೆ. ಈ ನಡುವೆ ಮುಡಾ(MUDA)ದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಕೆಲ ಅಕ್ರಮಗಳಲ್ಲಿ ಚಂದ್ರಶೇಖರ್ ಕೈವಾಡವಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಸಿಬಿಐ ತನಿಖೆ ಕೂಡ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂಬರೀಶ್ ಹೆಸರಿನಲ್ಲಿ ಚಂದ್ರಶೇಖರ್ ತೆಗೆದುಕೊಳ್ಳುವ ನಿರ್ಧಾರಗಳು ಸರಿಯಲ್ಲ. ಕಾರಣ ಅಂಬರೀಶ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಮನವಿ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ