ಯುವತಿಯ ಹೇಳಿಕೆ ಪ್ರಕಾರ, ಋತುಮತಿಯಾಗಿದ್ದ ಕಾರಣ ನನ್ನನ್ನು ಗ್ರಾಮದ ಹೊರ ವಲಯದಲ್ಲಿ ಗುಡಿಸಲಿನಲ್ಲಿರಿಸಲಾಗಿತ್ತು. ಈ ವೇಳೆ 8 ಮಂದಿ ಇದ್ದ ತಂಡವೊಂದು ನನ್ನ ಮೇಲೆ ಹಲ್ಲೆ ನಡೆಸಿ ಬಾಯಿಗೆ ಬಟ್ಟೆ ತುರುಕಿ ಕೈ ಕಾಲನ್ನು ಬಂಧಿಸಿ ಕಾಡಿಗೆ ಎಳೆದೊಯ್ದರು. ಬಳಿಕ ರಾತ್ರಿ 11 ಗಂಟೆ ವೇಳೆಯಲ್ಲಿ ನನ್ನ ಮೇಲೆ ತಣ್ಣೀರನ್ನು ಸುರಿದರು. ಬಳಿಕ ಆ ತಂಡದಲ್ಲಿ ಓರ್ವ ನನಗೆ ತಾಳಿ ಕಟ್ಟಿದ. ತರುವಾಯ ನನ್ನನ್ನು ಅವರೇ ಗುಡಿಸಲಿಗೆ ತಂದು ಬಿಟ್ಟು ಹೋದರು ಎಂಬುದಾಗಿ ಹೇಳಿಕೆ ನೀಡಿದ್ದಾಳೆ.
ಈ ಮೂಲಕ ಋತುಮತಿಯರಾದ ಮಹಿಳೆಯರನ್ನು ಗ್ರಾಮದ ಹೊರ ಇರಿಸುವ ಹಿಂದಿನ ಕಂದಾಚಾರ ಪದ್ಧತಿ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಇನ್ನೂ ಜಾರಿಯಲ್ಲಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು, ಇದು ಆಘಾತಕ್ಕೆ ಕಾರಣವಾಗಿದೆ. ಅಲ್ಲದೆ ಸರ್ಕಾರ ಇದನ್ನು ತಡೆಗಟ್ಟಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದು, ಹಾಸನ, ತುಮಕೂರು ಜಿಲ್ಲೆಗಳು ಸೇರಿದಂತೆ ರಾಜ್ಯದ ಇತರೆಡೆ ಇದ್ದ ಈ ಅನಿಷ್ಟ ಪದ್ಧತಿಯನ್ನು ತಹಬದಿಗೆ ತಂದಿದೆ.