ನೈಪುಣ್ಯ ಪದಗಳ ರೈಲ್ವೆ ಬಜೆಟ್ ಸೋಗಸಾಗಿತ್ತು: ಖರ್ಗೆ

ಗುರುವಾರ, 26 ಫೆಬ್ರವರಿ 2015 (15:45 IST)
ಇಂದಿನ ರೈಲ್ವೆ ಆಯವ್ಯಯವನ್ನು ನೈಪುಣ್ಯ ಪದಗಳನ್ನು ಬಳಸಿ ತುಂಬಾ ಚೆನ್ನಾಗಿ ಮಂಡಿಸಲಾಗಿದೆ. ಆದರೆ ಸಂಪನ್ಯೂಲಗಳನ್ನು ಕ್ರೋಢೀಕರಿಸುವ ಯಾವ ಪ್ರಯತ್ನಗಳೂ ಕಂಡು ಬಂದಿಲ್ಲ. ಆದ್ದರಿಂದ ಸರ್ಕಾರಕ್ಕೆ ಇದು ಕೇವಲ ಸಡಗರವೇ ಹೊರತು ಮತ್ತೇನೂ ಅಲ್ಲ ಎಂದು ಸಂಸತ್‌ನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. 
 
ಸಚಿವರು ಒಳ್ಳೆಯ ಆಲೋಚನೆಗಳನ್ನು ಹೊಂದಿರಬಹುದು, ಆದರೆ ಅವರ ಬಳಿ ಹಣವೇ ಇಲ್ಲ ಎಂದಾದಲ್ಲಿ ಆ ಯೋಜನೆಗಳನ್ನು ಹೇಗೆ ಕಾರ್ಯ ರೂಪಕ್ಕೆ ತರುತ್ತಾರೆ ಎಂದು ಪ್ರಶ್ನಿಸಿದ ಅವರು, ಸಚಿವರು ಯಾವುದೇ ಸಲಹೆ ಸೂಚನೆಗಳಿಲ್ಲದೆ ಕೇವಲ ಹಾಳೆ ಹಿಡಿದು ಬಜೆಟ್ ಮಂಡಿಸಿದ್ದಾರೆ. ಅವರು ಖಾಸಗಿ ಸಹಭಾಗಿತ್ವ, ಸರ್ಕಾರ ಎಂಬ ಪದಗಳನ್ನು ಬಳಸಿ ಜಂಟಿ ಸಾಹಸದ ಬಗ್ಗೆ ಮಾತನಾಡಿದ್ದಾರೆ. ಆದರೆ ಸ್ವತಂತ್ರವಾದ ಹಣದ ಮೂಲವಿಲ್ಲದೆ ಅವರು ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು. 
 
ಬಹುಶಃ, ನೂತನ ರೈಲುಗಳನ್ನು ಘೋಷಿಸದಿರುವುದು ಇದೇ ಮೊದಲ ಬಾರಿಯಾಗಿದ್ದು, ಎಲ್ಲಾ ಬಜೆಟ್‌ಗಳಲ್ಲಿಯೂ ಕೂಡ ರೈಲುಗಳನ್ನು ಘೋಷಿಸಲಾಗಿದೆ. ಸಚಿವರು ಕೇವಲ ಮುಂಬೈ ಹಾಗೂ ಅಹಮದಾಬಾದ್ ಪ್ರದೇಶಗಳ ಅಭಿವೃದ್ಧಿ ಬಗ್ಗೆ ಮಾತ್ರ ಚಿಂತಿಸುತ್ತಿದ್ದಾರೆ ಎಂದು ನಾನು ಹೇಳ ಬಲ್ಲೆ. ಏಕೆಂದರೆ ಪ್ರಧಾನಿ ನರೇಂದ್ರ ಮೋದಿಯವರು ಅಹಮದಾಬಾದ್ ಹಾಗೂ ರೈಲ್ವೆ ಸಚಿವರು ಮುಂಬೈನಿಂದ ಆರಿಸಿ ಬಂದಿದ್ದಾರೆ. ಅವರವರ ಕ್ಷೇತ್ರಗಳ ಅಭಿವೃದ್ಧಿಯನ್ನು ನೋಡಿಕೊಂಡರೆ ಇತರೆ ಪ್ರದೇಶದ ಅಭಿವೃದ್ಧಿ ಹೇಗೆ ಎಂದು ಪ್ರಶ್ನಿಸಿದರು. 
 
ರೈಲ್ವೆ ಇಲಾಖೆ ಇರುವುದು ಸಾರ್ವಜನಿಕರ ಸೇವೆಗಾಗಿ, ನಾವು ಇದನ್ನು ರಾಷ್ಟ್ರವನ್ನು ಒಗ್ಗೂಡಿಸುವಂತೆ ಬಳಸಬೇಕಿದೆ. ಅಲ್ಲದೆ ಈಶಾನ್ಯ ಭಾಗದ ರಾಜ್ಯವಾದ ಅರುಣಾಚಲ ಪ್ರದೇಶಕ್ಕೆ ರೈಲು ವ್ಯವಸ್ಥೆ ಇಲ್ಲದ ಕಾರಣ ಆ ರಾಜ್ಯ ಸೌಲಭ್ಯಗಳಿಂದ ವಂಚಿತವಾಗುತ್ತಿದ್ದು, ನಾವು ಅದಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ. ನಾನು ಈ ಹಿಂದೆ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ನಾನು ಆ ರಾಜ್ಯಕ್ಕೆ ಸ್ವಲ್ಪ ಭಾಗವಾದರೂ ಕೊಡುಗೆ ನೀಡಿದ್ದೇನೆ. ಆದರೆ ಪ್ರಸ್ತುತ ಬಜೆಟ್‌ನಲ್ಲಿ ಆ ರಾಜ್ಯದ ಬಗ್ಗೆ ಲಕ್ಷ್ಯವೇ ನೀಡಿಲ್ಲ ಎಂದು ಗುಡುಗಿದರು. 

ವೆಬ್ದುನಿಯಾವನ್ನು ಓದಿ