ಪೋಷಕರ ವಿರೋಧದ ನಡುವೆಯೂ ಕೈ ಹಿಡಿದಿದ್ದ ಮಹಿಳೆಯೋರ್ವಳ ಪತಿ ವರದಕ್ಷಿಣೆ ತರಲಿಲ್ಲ ಎಂದು ಕುಪಿತಗೊಂಡು ತನ್ನ ಪ್ರೀತಿಯ ಮಡದಿಯನ್ನೇ ಹತ್ಯೆಗೈದು ಬಾವಿಗೆಸೆದ ಹೃದಯವಿದ್ರಾವಕ ಘಟನೆ ನಗರದಲ್ಲಿ ನಡೆದಿದ್ದು, ಘಟನೆ ನಡೆದು 20 ದಿನಗಳ ತರುವಾಯ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ: ಮೃತ ಮಹಿಳೆ ಹಾಗೂ ಆಕೆಯ ಪತಿ ಇಬ್ಬರೂ ಕಳೆದ ಜನವರಿಯಲ್ಲಿ ವಿವಾಹವಾಗಿದ್ದರು. ಆದರೆ ಕಳೆದ ಎರಡು ತಿಂಗಳಿನಿಂದ ಈ ಇಬ್ಬರ ನಡುವೆ ವಿರಸ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆ ತವರು ಸೇರಿದ್ದಳು. ಬಳಿಕ ಒಂಟಿಯಾಗಿರದ ಪತಿ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಆಕೆಯ ಪೋಷಕರಿಗೆ ಭರವಸೆ ನೀಡಿ ಮತ್ತೆ ವಾಪಾಸ್ ಕರೆ ತಂದಿದ್ದ. ಈ ವೇಳೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಆದರೆ ತರಲು ತಿರಸ್ಕರಿದಳು ಎಂಬ ಕಾರಣದಿಂದ ಕುಪಿತಗೊಂಡು ತನ್ನ ಪತ್ನಿಯನ್ನು ತನ್ನ ಸ್ನೇಹಿತರೊಂದಿಗೆ ಸೇರಿ ಹತ್ಯೆಗೈದಿದ್ದಾನೆ. ಬಳಿಕ ಮೃತ ದೇಹವನ್ನು ತನ್ನ ಜಮೀನಿನಲ್ಲಿದ್ದ ಬಾವಿಗೆ ಎಸೆದಿದ್ದಾನೆ.
ಇನ್ನು ಮೃತ ಮಹಿಳೆಯ ಪೋಷಕರು ತಮ್ಮ ಮಗಳು ಅಂಜುಮ್(30) ಕಾಣೆಯಾಗಿದ್ದಾಳೆ, ಅಲ್ಲದೆ ಅವಳ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ನಗರದ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಪತಿಯನ್ನು ವಿಚಾರಣೆಗೊಳಪಡಿಸಿದ ಪೊಲೀಸರು, ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.