ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ನೂತನ ಭೃಷ್ಟಾಚಾರ ನಿಗ್ರಹ ದಳ ಸ್ಥಾಪನೆಗೆ ಸರ್ಕಾರ ಇಂದು ಅಧಿಸೂಚನೆ ಹೊರಡಿಸಿದ್ದು, ಸುಪ್ರೀಂಕೋರ್ಟ್, ಹೈಕೋರ್ಟ್ ಸೂಚನೆಯಂತೆ ಇದರ ಸ್ಥಾಪನೆಯಾಗುತ್ತಿದೆ. ಇದಕ್ಕೆ ವಿರೋಧ ವ್ಯಕ್ತ ಪಡಿಸಿರುವ ಬಿಜೆಪಿ ಲೋಕಾಯುಕ್ತ ಎಂಬ ಶವಪೆಟ್ಟಿಗೆಗೆ ಎಸಿಬಿ ರೂಪದಲ್ಲಿ ಸರ್ಕಾರ ಕೊನೆಯ ಮೊಳೆಯನ್ನು ಹೊಡೆದಿದೆ ಎಂದು ಕಿಡಿಕಾರಿದೆ.
ವಿಧಾನ ಮಂಡಲದಲ್ಲಿ ದೀರ್ಘ ಚರ್ಚೆಯ ನಂತರ ಶಾಸನಬದ್ಧವಾಗಿ ಬಂದ ಲೋಕಾಯುಕ್ತಕ್ಕೆ, ಕೇವಲ ಸರ್ಕಾರಿ ಆಜ್ಞೆಯ ಮೂಲಕ ಚರಮಗೀತೆ ಹಾಡ ಹೊರಟಿರುವ ಸರ್ಕಾರದ ನಡೆ ಖಂಡನೀಯ. ಇದು ಒಳ್ಳೆಯ ಸಂಸ್ಥೆಗಳ ಬಗ್ಗೆ, ಭೃಷ್ಟಾಚಾರದ ನಿಗ್ರಹದ ವಿರುದ್ಧ ಸರ್ಕಾರ ಹೊಂದಿರುವ ಧೋರಣೆ ಏನು ಎಂಬುದನ್ನು ತೋರಿಸುತ್ತದೆ. ಮುಂಬರುವ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ಮುಖವಾಡವನ್ನು ಬಹಿರಂಗ ಪಡಿಸಲಿದ್ದೇವೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.