ಆಡಳಿತ ಪಕ್ಷಧ ಶಾಸಕನಿಂದಲೇ ಸರ್ಕಾರಕ್ಕೆ ಚಾಟಿ...?!

ಗುರುವಾರ, 12 ಫೆಬ್ರವರಿ 2015 (15:13 IST)
ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಕರಣ ಇಂದು ನಡೆದಿದ್ದು, ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ್ ರಾಯರೆಡ್ಡಿ ಅವರು 'ಜಿಮ್'ವೈಫಲ್ಯದ ವಿರುದ್ಧ ವಾಗ್ದಾಳಿ ನಡೆಸಿದರು. 
 
ಈ ಹಿಂದೆ ಸರ್ಕಾರ ನಡೆಸಿದ ಅಂತಾರಾಷ್ಟ್ರೀಯ ಹೂಡಿಕೆದಾರರ ಸಮಾವೇಶ(ಜಿಮ್)ದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒಡಂಬಡಿಕೆಯಾಗಿದ್ದರೂ ಕೂಡ ಇಲ್ಲಿಯ ವರೆಗೂ ಎಲ್ಲಿಯೂ ಕೂಡ ಒಂದೇ ಒಂದು ಕೈಗಾರಿಕೆ ಸ್ಥಾಪನೆಯಾಗಿಲ್ಲ. ಇದು ಕೇವಲ ರಿಯಲ್ ಎಸ್ಟೇಟ್ ದಂಧೆಯಾಗಿ ಕಾಣುತ್ತಿದೆ ಎಂದು ಗರಂ ಆದ ಶಾಸಕರು, ಕಾರ್ಖಾನೆಗಳನ್ನು ಆರಂಭಿಸಿ ಇಲ್ಲವಾದಲ್ಲಿ ಪಡೆದಿರುವ ಜಾಗವನ್ನು ರೈತರಿಗೇ ವಾಪಸ್ ಕೊಡಿ. ರೈತರಿಂದ ವ್ಯವಸಾಯ ಮಾಡುವ ಜಾಗವನ್ನು ಪಡೆದರೂ ಕಾರ್ಖಾನೆ ಸ್ಥಾಪನೆಯಾಗುವುದಿಲ್ಲ ಎಂದ ಮೇಲೆ ಜಾಗ ಏಕೆ ಎಂದು ಪ್ರಶ್ನಿಸಿದರು. 
 
ಬಳಿಕ ಮಾತನಾಡಿದ ಅವರು, ಸಮಾವೇಶಕ್ಕಾಗಿ 66 ಕೋಟಿ ರೂ. ವೆಚ್ಚ ಮಾಡಿ ಒಟ್ಟು 1,21,286 ಎಕರೆ ಭೂಮಿಯನ್ನು ಎಕರೆಗೆ 5 ಲಕ್ಷರೂ ನಂತೆ ಭೂ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಅಲ್ಲದೆ ಬ್ರಹ್ಮಿಣಿ ಸ್ಟೀಲ್ ಕಂಪನಿಗೆ 5000 ಎಕರೆ ಜಾಗವನ್ನು ನೀಡಲಾಗಿತ್ತು. ಆದರೆ ಕಂಪನಿ ತೆರೆಯದೆ ನೀಡಿದ್ದ ಜಾಗವನ್ನು ಮುಂಬೈ ಮೂಲದವರಿಗೆ ಮಾರಿಕೊಂಡಿತು ಎಂದು ಗರಂ ಆದರು. 
 
ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯ ಸರ್ಕಾರಗಳು ಭೂ ಸ್ವಾಧೀನ ಕಾಯಿದೆ ತಿದ್ದುಪಡಿ ತಂದಿದ್ದು, ಸರಳೀಕರಣಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕರವು ಈ ರಾಜ್ಯಗಳಿಗೆ ಕಂಪನಿ ಸ್ಥಾನೆಯಲ್ಲಿ ಹೆಚ್ಚಿನ ಸವಲತ್ತನ್ನು ಒದಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಾವೂ ಕೂಡ ತಿದ್ದುಪಡಿ ತರಬೇಕಾದ ಅಗತ್ಯವಿದೆ ಎಂದರು. 

ವೆಬ್ದುನಿಯಾವನ್ನು ಓದಿ