ಅನುಮತಿ ಮೀರಿ ಜಾಹಿರಾತು ಅಳವಡಿಕೆ: ಬಿಜೆಪಿ ವಿರುದ್ಧ ಬಿಬಿಎಂಪಿ ಕ್ರಮ

ಗುರುವಾರ, 2 ಏಪ್ರಿಲ್ 2015 (12:08 IST)
ಬಿಜೆಪಿ ಪಕ್ಷದ ಜಾಹಿರಾತು ಫಲಕಗಳು ನಗರದ ಹಲವೆಡೆ ರಾರಾಜಿಸುತ್ತಿದ್ದು, ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿ ಅಳವಡಿಸಲಾಗಿದೆ ಎಂಬ ಕಾರಣದಿಂದ ಬಿಬಿಎಂಪಿ ಅಧಿಕಾರಿಗಳು ಪಕ್ಷದ ನಾಯಕರ ವಿರುದ್ಧ ದೂರು ದಾಖಲಿಸಿಕೊಳ್ಳಲು ನಿರ್ಧರಿಸಿದ್ದಾರೆ.   
 
ಹೌದು, ಬಿಜೆಪಿ ಪಕ್ಷದ ವತಿಯಿಂದ ನಗರದಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ಪ್ರಧಾನಿ ಮೋದಿ ಅವರೂ ಕೂಡ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕಾರಿಣಿಯ ಕೇಂದ್ರ ಬಿಂದುವಾಗಿರುವ ಪ್ರಧಾನಿ ಮೋದಿ ಅವರ ಅದ್ದೂರಿ ಸ್ವಾಗತಕ್ಕಾಗಿ ರಾಜ್ಯ ಬಿಜೆಪಿ ಘಟಕದ ನಾಯಕರು ನಿರ್ಧರಿಸಿ ಜಾಹೀರಾತು ಫಲಕ ಹಾಕಿದ್ದಾರೆ. ಆದರೆ ಅಳವಡಿಸಿರುವ ಜಾಹೀರಾತುಗಳು ನಿಗಧಿತ ಪ್ರಮಾಣಕ್ಕಿಂತ ಅಧಿಕವಾಗಿದ್ದು, ಅಳವಡಿಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. 
 
ಬಿಬಿಎಂ ಪಿಯ ಜಾಹೀರಾತು ವಿಭಾಗದ ಸಹಾಯಕ ಆಯಕ್ತ ಕೆ.ಮಥಾಯಿ ಅವರು ಈ ಕ್ರಮಕ್ಕೆ ಮುಂದಾಗಿದ್ದು, ನಗರದ ಪೂರ್ವ ವಿಭಾಗದ ಜಂಟಿ ಆಯುಕ್ತರಿಗೆ ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. 
 
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಥಾಯಿ, ಜಾಹೀರಾತು ಅಳವಡಿಕೆ ಸಂಬಂಧ ಪಾಲಿಕೆಯ ಆಯುಕ್ತ ಲಕ್ಷ್ಮಿ ನಾರಾಯಣ ಅವರಿಂದ ಅನುಮತಿ ಪಡೆದಿದ್ದಾರೆ. ಆದರೆ ಅಳವಡಿಸಿರುವ ಜಾಹಿರಾತ ಫಲಕಗಳು 2000ಕ್ಕೂ ಹೆಚ್ಚಿದ್ದು, ಅನುಮತಿಗೂ ಮೀರಿವೆ. ಈ ಹಿನ್ನೆಲೆಯಲ್ಲಿ ಅನುಮತಿ ಪಡೆದಿರುವುದಕ್ಕಿಂತ ಅಧಿಕವಾಗಿರುವುದರಿಂದ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದೇವೆ ಎಂದಿದ್ದಾರೆ. 
 
ಅನುಮತಿಗಿಂತ ಅಧಿಕ ಜಾಹೀರಾತುಗಳನ್ನು ಅಳವಡಿಸುವಂತಿಲ್ಲ ಎಂಬ ನಿರ್ಣಯವನ್ನು ಪಾಲಿಕೆಯ ಸದಸ್ಯರು ಕಳೆದ ಸಭೆಯಲ್ಲಿ ನಿರ್ಧರಿಸಿ ನಿಯಮ ರೂಪಿಸಿತ್ತು ಎನ್ನಲಾಗಿದ್ದು, ಇದರನ್ವಯ ಕ್ರಮಕ್ಕೆ ಮುಂದಾಗಲಿದೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ