ಮೇಟಿ ಪ್ರಕರಣ: ಸಿಐಡಿ ವರದಿ ನಂತ್ರ ಸತ್ಯ ಸಂಗತಿ ಬಹಿರಂಗ ಎಂದ ಸಚಿವ ರಾಮಲಿಂಗಾರೆಡ್ಡಿ

ಸೋಮವಾರ, 19 ಡಿಸೆಂಬರ್ 2016 (19:24 IST)
ಮಾಜಿ ಸಚಿವ ಎಚ್.ವೈ.ಮೇಟಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಬಾಹುಬಲಿ ಸಿನಿಮಾ ರೀತಿಯ ಸಿಡಿ ಎಂದು ಹೇಳಿಕೆ ನೀಡಿದ್ದೆ. ಮೇಟಿ ಅವರ ಹೇಳಿಕೆಯನ್ನಾಧರಿಸಿ ಈ ರೀತಿಯ ಹೇಳಿಕೆ ನೀಡಿದ್ದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.
 
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಎಚ್.ವೈ.ಮೇಟಿ ರಾಸಲೀಲೆ ಪ್ರಕರಣದ ಕುರಿತು ಸಿಐಡಿ ತನಿಖೆ ನಡೆಯುತ್ತಿದೆ. ಸಿಐಡಿ ತನಿಖೆಯ ವರದಿ ಬಂದ ಬಳಿಕ ಸತ್ಯಾಸತ್ಯತೆ ಹೊರಬರಲಿದೆ ಎಂದು ಹೇಳಿದರು.
 
ರಾಸಲೀಲೆ ಸಿಡಿಯಲ್ಲಿರುವುದು ನಾನಲ್ಲ. ಅದು ನಕಲಿ ಸಿಡಿ ಎಂದು ಮೇಟಿ ಅವರು ನೀಡಿದ್ದ ಹೇಳಿಕೆ ಆಧರಿಸಿ ಬಾಹುಬಲಿ ಸಿನಿಮಾದಂತಹ ಸಿಡಿ ಎಂದು ನಿನ್ನೆ ಬಾಗಲಕೋಟೆಯಲ್ಲಿ ಹೇಳಿಕೆ ನೀಡಿದ್ದೆ ಅಷ್ಟೆ ಎಂದು ಸಮಜಾಯಿಸಿ ನೀಡಿದರು. 
 
ಇಂತಹ ಘಟನೆಗಳು ನಡೆದಾಗ ಸಹಜವಾಗಿ ಪಕ್ಷಕ್ಕೆ ಮುಜುಗರವಾಗುತ್ತದೆ. ಇನ್ನು ಕೆಲವು ಶಾಸಕರು ಹಾಗೂ ಸಚಿವರ ಸಿಡಿಗಳು ಇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಅವರ ಬಳಿ ಸಿಡಿ ಇದ್ದರೆ ಬಹಿರಂಗಪಡಿಸಲಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸವಾಲ್ ಹಾಕಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ