ರೈತರ ಮನೆಗೆ ತೆರಳದ ಸಚಿವ ಅಂಬರೀಶ್: ದಿಗ್ವಿಜಯ್ ಸಿಂಗ್ ತರಾಟೆ

ಶುಕ್ರವಾರ, 9 ಅಕ್ಟೋಬರ್ 2015 (18:04 IST)
ಪಕ್ಷದ ವರಿಷ್ಠರ ಆಜ್ಞೆ ಮೇರೆಗೆ ಮೃತ ರೈತ ಕುಟುಂಬವನ್ನು ಸಂಪರ್ಕಿಸಿ ಸಾಂತ್ವನ ಹೇಳುವಂತೆ ಸೂಚಿಸಿದ್ದರೂ ಕೂಡ ಮೃತ ರೈತನ ಮನೆಗೆ ತೆರಳಲಿಲ್ಲ ಎಂಬ ಕಾರಣಕ್ಕೆ ಸಚಿವ ಅಂಬರೀಶ್ ಅವರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 
 
ಹೌದು, ನಿನ್ನೆ ಜಿಲ್ಲೆಯ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಸಾಂತ್ವನ ಹೇಳಲೆಂದೇ ಬಂದಿದ್ದರಾದರೂ ಸಮಯದ ಅಭಾವದಿಂದ ಒಂದು ಕಡೆ ತೆರಳಲು ಮಾತ್ರ ನಿರ್ಧರಿಸಲಾಗಿತ್ತು. ಆದ್ದರಿಂದ ಮತ್ತೊಂದು ಸ್ಥಳಕ್ಕೆ ಉಸ್ತುವಾರಿ ಸಚಿವರಾಗಿರುವ ಅಂಬರೀಶ್ ಅವರನ್ನು ಕಳುಹಿಸಿ ಕೊಡಲು ನಿರ್ಧರಿಸಿ ಸೂಚಿಸಲಾಗಿತ್ತು. ಆದರೆ ಅಂಬರೀಶ್ ಸೂಚನೆಯಂತೆ ಸ್ಥಳ ತೆರಳಿರಲಿಲ್ಲ. ಇದರಿಂದ ಕುಪಿತಗೊಂಡ ಸಿಂಗ್, ರಾಹುಲ್ ಸಮ್ಮುಖದಲ್ಲಿಯೇ ತೀವ್ರ ತರಾಟೆಗೆ ತೆಗೆದುಕೊಂಡರು.  
 
ಇನ್ನು ನಿನ್ನೆ ತಾಲೂಕಿನ ಕೊತ್ತತ್ತಿ ಗ್ರಾಮದ ಮಹಾದೇವಪ್ಪ ಹಾಗೂ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ನಾಯಸಿಂಗನಹಳ್ಳಿ ಲೋಕೇಶ್ ಎಂಬ ಇಬ್ಬರು ರೈತರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕೊತ್ತತ್ತಿ ಗ್ರಾಮಕ್ಕೆ ಭೇಟಿ ನೀಡುವಂತೆ ರಾಹುಲ್ ಅಂಬರೀಶ್ ಅವರಿಗೆ ಸೂಚಿಸಿದ್ದರು. ಅಲ್ಲದೆ ರಾಹುಲ್ ಮೃತ ರೈತ ಲೋಕೇಶ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಮಂಡ್ಯದ ವಿಸಿ ಫಾರ್ಮ್‌ನಲ್ಲಿ ನಡೆಯುತ್ತಿದ್ದ ಸಂವಾದ ವೇಳೆ ಈ ಘಟನೆ ನಡೆದಿದೆ. 

ವೆಬ್ದುನಿಯಾವನ್ನು ಓದಿ