ರವೀಂದ್ರ ಕಲಾಕ್ಷೇತ್ರದಲ್ಲಿ ಅನಂತಮೂರ್ತಿ ಪಾರ್ಥಿವ ಶರೀರದ ಅಂತಿಮದರ್ಶನ

ಶನಿವಾರ, 23 ಆಗಸ್ಟ್ 2014 (10:54 IST)
ನಿನ್ನೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದ ಖ್ಯಾತ ಸಾಹಿತಿ ಅನಂತಮೂರ್ತಿ ಅವರ ಅಂತ್ಯಕ್ರಿಯೆ ಜ್ಞಾನಭಾರತಿಯ ಕಲಾಗ್ರಾಮದಲ್ಲಿ ನಡೆಯಲಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದು, ಅನಂತಮೂರ್ತಿ ಅವರ ಡಾಲರ್ಸ್ ಕಾಲನಿ ನಿವಾಸದಲ್ಲಿ ಸದಾನಂದ ಗೌಡ, ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ಮುಂತಾದ ಗಣ್ಯರು ಅವರ ಅಂತಿಮ ದರ್ಶನ ಪಡೆದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಮಧ್ಯಾಹ್ನ 2 ಗಂಟೆವರೆಗೆ ಅಂತಿಮದರ್ಶನಕ್ಕೆ ಏರ್ಪಾಡು ಮಾಡಲಾಗಿದೆ. ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ರವೀಂದ್ರ ಕಲಾಕ್ಷೇತ್ರಕ್ಕೆ ವಿಶೇಷ ವಾಹನದಲ್ಲಿ  ಸದಾಶಿವನಗರ, ಮೇಕ್ರಿಸರ್ಕಲ್ , ಪ್ಯಾಲೇಸ್ ರೋಡ್ ಮಾರ್ಗವಾಗಿ ರವಾನೆ ಮಾಡಲಾಯಿತು. ಪಾರ್ಥಿವ ಶರೀರ ಇಡಲು 2.30 ಅಡಿ ವೇದಿಕೆ ಸಿದ್ದವಾಗಿದೆ. ಕುಟುಂಬಸ್ಥರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ.

2 ಗೇಟ್‌ಗಳ ಮೂಲಕ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗದುತ್ತದೆ. ನಿರಂತರ ಸಂಗೀತಕ್ಕೆ ವ್ಯವಸ್ಥೆ ಮಾಡಲಾಗಿದೆ. ನಿಸಾರ್ ಅಹ್ಮದ್, ವೀರಯ್ಯ, ಸಚಿವೆ ಉಮಾಶ್ರೀ ಸ್ಥಳಕ್ಕೆ ಆಗಮಿಸಿದ್ದಾರೆ. ಪ್ರಧಾನಿ ಮೋದಿ ಟ್ವೀಟ್‌ನಲ್ಲಿ ಅನಂತಮೂರ್ತಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅಂತ್ಯಸಂಸ್ಕಾರದ ವೇಳೆ ರೈತಗೀತೆ, ಭಾವಗೀತೆ ಗಾಯನ ಮಾಡಲಾಗುತ್ತದೆ.  ಭಾವಗೀತೆ ಗಾಯಕರಿಗಾಗಿ ಸ್ಥಳದಲ್ಲಿ ವಿಶೇಷ ವೇದಿಕೆ ನಿರ್ಮಿಸಲಾಗಿದೆ.

ವೈ. ಕೆ. ಮುದ್ದುಕೃಷ್ಣ ತಂಡದಿಂದ ಅಗಲಿದ ಚೇತನಕ್ಕೆ  ಗೀತನಮನ ನಡೆಯಲಿದೆ.  ಶಿವಮೊಗ್ಗ ಸುಬ್ಬಣ್ಣ, ಕಿಕ್ಕೇರಿ ಕೃಷ್ಣಮೂರ್ತಿ, ಅರ್ಚನ ಉಡುಪ, ರತ್ನಮಾಲಾ ಪ್ರಕಾಶ್, ಸುನಿತಾ ತಂಡದಿಂದ ಗೀತನಮನ ನಡೆಯಲಿದೆ.  ಜಿಎಸ್‌ ಶಿವರುದ್ರಪ್ಪ ಸಮಾಧಿ ಪಕ್ಕದಲ್ಲೇ ಅನಂತಮೂರ್ತಿ ಅವರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ