ಮಧ್ಯಮ ವರ್ಗದ ಕುಟುಂಬದ ಹಂಚಿನಮನಿ ಎಂಬುವವರು ಅನ್ನಭಾಗ್ಯ ಯೋಜನೆಯಡಿ ಪಡಿತರ ಅಂಗಡಿಯಲ್ಲಿ ಬಿಪಿಎಲ್ ಕಾರ್ಡ್ ಮೂಲಕ 'ಅನ್ನಭಾಗ್ಯ-ಹಸಿವುಮುಕ್ತ ಕರ್ನಾಟಕ' ಹೆಸರಿನ ಉಪ್ಪನ್ನು ಪಡೆದಿದ್ದರು. ಅವರ ಜತೆ ಹೊಸೂರ ಓಣಿ ನಿವಾಸಿಗಳು ಸಹ ಅನ್ನಭಾಗ್ಯ ಉಪ್ಪನ್ನು ಖರೀದಿಸಿದ್ದರು. ಅದನ್ನು ಅಡುಗೆಗೆ ಬಳಸಿ ಅವರೆಲ್ಲ ಊಟ ಮಾಡಿದ್ದಾರೆ. ಕೆಲವೇ ಕ್ಷಣದಲ್ಲಿ ಮಲ್ಲಪ್ಪ, ಬಸವ್ವ ಮಾಳಾಪುರ ದಂಪತಿ ಹಾಗೂ ಬಸಪ್ಪ, ಸರೋಜಾ ಎಂಬುವವರು ವಾಂತಿ-ಬೇಧಿಗೆ ಒಳಗಾದರು. ಕೂಡಲೇ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಯಾಕಾಗಿ ಅವರು ವಾಂತಿ-ಭೇದಿಗೆ ಒಳಗಾದರು ಎಂದು ಪರೀಕ್ಷೆಗೆ ಒಳಪಡಿಸಿದಾಗ ಕಳಪೆ ಹಾಗೂ ವಿಷಯುಕ್ತ ಉಪ್ಪು ಬಳಸಿದ್ದರಿಂದ ಈ ಸಮಸ್ಯೆಯಾಗಿದೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಪಡಿತರ ಅಂಗಡಿಯಿಂದ ಉಪ್ಪು ಖರೀದಿಸಿದ ಪ್ರತಿಯೊಂದು ಕುಟುಂಬ ಸದಸ್ಯರು ಬೀದಿಗಿಳಿದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಉಪ್ಪನ್ನು ಹೊರಗೆ ಚೆಲ್ಲಿ ಸರಕಾರದ ವಿರುದ್ಧ ಘೋಷಣೆ ಕೂಗಿದರೆ, ಇನ್ನು ಕೆಲವರು ಬಡವರನ್ನು ಯಾಮಾರಿಸಲೆಂದು ಉಪ್ಪು ನೀಡುತ್ತಿದ್ದಾರೆ ಎಂದು ದೂರಿದರು. ಅನ್ನ ಹಾಗೂ ಪಲ್ಯಕ್ಕೆ ಉಪ್ಪು ಹಾಕಿದಾಗ ಅಡುಗೆ ಹಸಿರು ಬಣ್ಣಕ್ಕೆ ತಿರುಗಿದೆ ಎಂದು ಕೆಲವು ಮಹಿಳೆಯರು ಆತಂಕ ಪಡಿಸಿದರು.