ರಾಜ್ಯದಲ್ಲಿ ಮತ್ತೋರ್ವ ರೈತ ಆತ್ಮಹತ್ಯೆ: ಸಾವಿನ ಸಂಖ್ಯೆ ಏಳಕ್ಕೆ ಏರಿಕೆ

ಮಂಗಳವಾರ, 30 ಜೂನ್ 2015 (11:47 IST)
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದ್ದು, ಜಿಲ್ಲೆಯಲ್ಲಿ ಮತ್ತೋರ್ವ ರೈತ ವಿಷ ಸೇವಿಸುವ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. 
 
ಆತ್ಮಹತ್ಯೆಗೆ ಶರಣಾತ ರೈತನನ್ನು ಅಶೋಕ್ ಮಡಿವಾಳಲ್(45) ಎಂದು ಹೇಳಲಾಗಿದ್ದು, ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಮೈದೂರು ಗ್ರಾಮದ ನಿವಾಸಿ ಎಂದು ಹೇಳಲಾಗಿದೆ. 
 
ಈತ ಎರಡು ಎಕರೆ ಜಮೀನನ್ನು ಹೊಂದಿದ್ದು, 5 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಾಲವನ್ನು ತೀರಿಸಲಾಗದೆ ತನ್ನ ಜಮೀನಿನಲ್ಲಿಯೇ ವಿಷ ಸೇವಿಸಿ ಆಥ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 
 
ಈ ಸಂಬಂಧ ರಾಣಿಬೆನ್ನೂರು ನಗರ ಠಾಣೆಯಲ್ಲಿ ಪ್ರಕಱಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.  
 
ಈ ಮೂಲಕ ಮಂಡ್ಯ-3, ಮೈಸೂರು-1, ಬೆಳಗಾವಿ-1, ಚಿಕ್ಕಬಳ್ಳಾಪುರ-1, ಹಾವೇರಿ-1,  ಹೀಗೆ ಸಾವಿನಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಇನ್ನು ಮೂವರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
 
ಈ ಹಿಂದೆಯೂ ಕೂಡ ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿದ್ದು, ಕಳೆದ ಜೂನ್ 8ರಂದು ಬೆಳಗಾವಿಯ ಅಂಕಲಗಿ ಗ್ರಾಮದ ರೈತ ಗುರುನಾಥ್, ಜೂನ್.28ರಂದು ಹೊನ್ನನಾಯಕನಹಳ್ಳಿಯ ರೈತ ಶಿವಲಿಂಗೇಗೌಡ, ಗಾಣದ ಹೊಸೂರಿನ ನಿಂಗೇಗೌಡ ಹಾಗೂ ಮಂಡ್ಯದ ಮಹೇಶ್, ಬಸವರಾಜ್ ಹಾಗೂ ಚಿಕ್ಕಬಳ್ಳಾಪುರದ ಭೋಗಣ್ಣ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
 
ಇನ್ನು ಶಿವಮೊಗ್ಗದಲ್ಲಿ ಇಬ್ಬರು ದಂಪತಿಗಳು ಆತ್ಮಹತ್ಯೆಗೆ ಯತ್ನಿಸಿದ್ದರೆ, ಮತ್ತೊಂದು ಕಡೆ ಬೆಳಗಾವಿಯ ರಾಯಭಾಗ ತಾಲೂಕಿನ ನೀಲಾದಿ ಗ್ರಾಮದ ಸಿದ್ದರಾಯ(27) ಎಂಬ ರೈತ ಸುವರ್ಣಸೌಧದ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಪ್ರಸ್ತುತ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ