ಪಾಂಡವಪುರ ಆಯ್ತು ಈಗ ನಂಜನಗೂಡು: ಮತ್ತೋರ್ವ ರೈತನ ಆತ್ಮಹತ್ಯೆ

ಶುಕ್ರವಾರ, 26 ಜೂನ್ 2015 (16:04 IST)
ಸರ್ಕಾರ ಕಬ್ಬು ಬೆಳೆಗಾರರಿಗೆ ಸೇರಬೇಕಿರುವ ಬಾಕಿ ಹಣವನ್ನು ವಸೂಲಾತಿ ಮಾಡಿಕೊಡುವಲ್ಲಿ ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರೈತರ ಆತ್ಮಹತ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 
 
ಹೌದು, ನಿನ್ನೆಯಷ್ಟೇ ಪಾಂಡವಪುರದ ಗಾಣದಹೊಸೂರಿನಲ್ಲಿ ರೈತನೋರ್ವ ಆತ್ಮಹತ್ಯೆಗೆ ಶರಣಾಗಿದ್ದ ಸುದ್ದಿ ಇನ್ನು ಹಸಿರಾಗಿರುವಾಗಲೇ ಇಂದು ಮತ್ತೊಂದು ಆತ್ಮಹತ್ಯೆ ಸುದ್ದಿ ಕೇಳಿ ಬರುತ್ತಿರುವುದು ದುರಾದೃಷ್ಟಕರ. ಅಲ್ಲದೆ ಇದು ರಾಜ್ಯದಲ್ಲಿನ ರೈತರ ದುಸ್ಥಿತಿಯನ್ನು ತೋರಿಸುತ್ತದೆ. 
 
ಜಿಲ್ಲೆಯ ನಂಜನಗೂಡು ತಾಲೂಕಿನ ಸಿದ್ದೇಗೌಡನಹುಂಡಿ ಗ್ರಾಮ ನಿವಾಸಿ ಶಿವಲಿಂಗೇಗೌಡ(45) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿಯಾಗಿದ್ದು, ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. 
 
ಇನ್ನು ಈತನೂ ಕೂಡ ಕಬ್ಬು ಬೆಳೆಗಾರ ಎಂದು ಹೇಳಲಾಗಿದ್ದು, 5 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗಿದೆ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. 
 
ಈ ಪ್ರಕರಣ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ