ಅರ್ಕಾವತಿ ಡಿ-ನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾವೆ ಹೂಡಲು ರಾಜ್ಯಪಾಲರ ಅನುಮತಿ ಪಡೆಯವ ಸಲುವಾಗಿ ರಾಜ್ಯ ಬಿಜೆಪಿ ತಂಡ ಇಂದು ರಾಜಭವನಕ್ಕೆ ಆಗಮಿಸಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ರಾಜ್ಯಪಾಲ ವಜುಭಾಯಿ ವಾಲಾ ಅವರ 76ನೇ ವರ್ಷದ ಹುಟ್ಟು ಹಬ್ಬವಾಗಿದ್ದು, ನಗರದ ರಾಜಭವನಕ್ಕೆ ಆಗಮಿಸಿದ ಬಿಜೆಪಿ ನಾಯಕರು ಶುಭ ಕೋರಿದರು. ಇದೇ ವೇಳೆ, ರಾಜ್ಯದಲ್ಲಿ ಭಾರೀ ಸುದ್ದಿಯಾಗಿರುವ ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಭಾರೀ ಅಕ್ರಮ ನಡೆದಿದ್ದು, ಸಿಎಂ ಸಿದ್ದರಾಮಯ್ಯನವರ ವಿರುದ್ಧ ಧಾವೆ ಹೂಡಲು ಅನುಮತಿ ಕೋರಿದ್ದಾರೆ ಎನ್ನಲಾಗಿದೆ.
ತಂಡದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಷಿ, ವಿಧಾನಸಭಾ ವಿರೋಧ ಪಕ್ಷ ನಾಯಕ ಜಗದೀಶ್ ಶೆಟ್ಟರ್, ಶಾಸಕ ಹಾಗೂ ಮಾಜಿ ಸಚಿವ ಆರ್. ಅಶೋಕ್ ಸೇರಿದಂತೆ ಇತರರಿದ್ದ ನಿಯೋಗ ಭೇಟಿ ಮಾಡಿತ್ತು.