ಅಕ್ರಮ ಡಿನೋಟಿಫಿಕೇಶನ್ ಪ್ರಕರಣ: ರಾಜ್ಯಪಾಲರನ್ನು ಭೇಟಿ ಮಾಡಿದ ಬಿಜೆಪಿ ನಾಯಕರು

ಶುಕ್ರವಾರ, 23 ಜನವರಿ 2015 (13:41 IST)
ಅರ್ಕಾವತಿ ಡಿ-ನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾವೆ ಹೂಡಲು ರಾಜ್ಯಪಾಲರ ಅನುಮತಿ ಪಡೆಯವ ಸಲುವಾಗಿ ರಾಜ್ಯ ಬಿಜೆಪಿ ತಂಡ ಇಂದು ರಾಜಭವನಕ್ಕೆ ಆಗಮಿಸಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. 
 
ಇಂದು ರಾಜ್ಯಪಾಲ ವಜುಭಾಯಿ ವಾಲಾ ಅವರ 76ನೇ ವರ್ಷದ ಹುಟ್ಟು ಹಬ್ಬವಾಗಿದ್ದು, ನಗರದ ರಾಜಭವನಕ್ಕೆ ಆಗಮಿಸಿದ ಬಿಜೆಪಿ ನಾಯಕರು ಶುಭ ಕೋರಿದರು. ಇದೇ ವೇಳೆ, ರಾಜ್ಯದಲ್ಲಿ ಭಾರೀ ಸುದ್ದಿಯಾಗಿರುವ ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಭಾರೀ ಅಕ್ರಮ ನಡೆದಿದ್ದು, ಸಿಎಂ ಸಿದ್ದರಾಮಯ್ಯನವರ ವಿರುದ್ಧ ಧಾವೆ ಹೂಡಲು ಅನುಮತಿ ಕೋರಿದ್ದಾರೆ ಎನ್ನಲಾಗಿದೆ. 
 
ಹಲವು ದಾಖಲೆಗಳೊಂದಿಗೆ ಆಗಮಿಸಿದ್ದ ನಾಯಕರು, ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆಯೇ ಇಂದು ರಾಜ್ಯಪಾಲರನ್ನು ಭೇಟಿಯಾಗಿ ಪ್ರಕರಣದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ರಾಜ್ಯಪಾಲರಿಗೆ ಸಂಪೂರ್ಣವಾಗಿ ವಿವರಿಸಿದ್ದಾರೆ ಎನ್ನಲಾಗಿದೆ.  
 
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರೂ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಧಾವೆ ಹೂಡಲು ಬಿಜೆಪಿ ನಾಯಕರಿಗೆ ಅನುಮತಿ ನೀಡುವ ಸಂಭವವಿದೆ ಎಂದು ತಿಳಿದು ಬಂದಿದೆ.  
 
ತಂಡದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಷಿ, ವಿಧಾನಸಭಾ ವಿರೋಧ ಪಕ್ಷ ನಾಯಕ ಜಗದೀಶ್ ಶೆಟ್ಟರ್, ಶಾಸಕ ಹಾಗೂ ಮಾಜಿ ಸಚಿವ ಆರ್. ಅಶೋಕ್ ಸೇರಿದಂತೆ ಇತರರಿದ್ದ ನಿಯೋಗ ಭೇಟಿ ಮಾಡಿತ್ತು.

ವೆಬ್ದುನಿಯಾವನ್ನು ಓದಿ