ಸುವರ್ಣಸೌಧದ ಮುತ್ತಿಗೆಗೆ ಯತ್ನ: ರೈತರನ್ನು ಬಂಧಿಸಿದ ಪೊಲೀಸರು

ಸೋಮವಾರ, 29 ಜೂನ್ 2015 (18:38 IST)
ತಮ್ಮ ಸಮಸ್ಯೆಗಳಿಗೆ ಸರ್ಕಾರ ಸ್ಪಂಧಿಸಲಿಲ್ಲ ಎಂದು ಬೇಸತ್ತು ಅಧಿವೇಶನ ನಡೆಯುತ್ತಿದ್ದ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರು ಬಂಧಿಸಿದ ಘಟನೆ ನಗರದಲ್ಲಿ ಇಂದು ನಡೆದಿದೆ.  
 
ಸರ್ಕಾರಕ್ಕೆ ಮಧ್ಯಾಹ್ನ 2 ಗಂಟೆ ವರೆಗೆ ಗಡುವು ನೀಡಿದ್ದ ರೈತರು, ಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿಸಬೇಕು ಹಾಗೂ ಸರ್ಕಾರ ಈ ಹಿಂದೆ ರೈತರಿಗೆ ನೀಡಿದ್ದ ಆಶ್ವಾಸನೆಯಂತೆ ಕಬ್ಬಿಗೆ 2500 ರೂ ಬೆಂಬಲ ಬೆಲೆ ನೀಡುವುದೂ ಸೇರಿದಂತೆ ಸರ್ಕಾರಕ್ಕೆ ಹಲವು ಷರತ್ತುಗಳನ್ನು ವಿಧಿಸಿ ಅಂತಿಮ ನಿರ್ಣ ಪ್ರಕಟಿಸುವಂತೆ ಸೂಚಿಸಿದ್ದರು. ಬಳಿಕ ಪೂನ-ಬೆಳಗಾವಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಗಡುವಿನ ಅವಧಿ ಮುಗಿದರೂ ಕೂಡ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸುವರ್ಣಸೌಧವನ್ನು ಮುತ್ತಿಗೆ ಹಾಕಲು ಯತ್ನಿಸಿದರು. 
 
ಈ ವೇಳೆ ರೈತರನ್ನು ತಡೆಯಲು ವಿಫಲವಾದ ಪೊಲೀಸರು ಹಲವರನ್ನು ಬಂಧಿಸಿದರು. ಬಂಧಿತರಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಕುರುಬೂರು ಶಾಂತಕುಮಾರ್ ಅವರೂ ಕೂಡ ಇದ್ದರು. 
 
ಇನ್ನು ಇದೇ ವೇಳೆ ಸದನದ ಒಳಗೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರು ಸಭಾಧ್ಯಕ್ಷರಲ್ಲಿ ರೈತರನ್ನು ಬಂಧಿಸದಂತೆ ಸೂಚಿಸಲು ಬೇಡಿ ಧರಣಿಗೆ ಮುಂದಾದರು. ಅಲ್ಲದೆ ರೈತರ ಸಮಸ್ಯೆಗಳಿಗೆ ಸ್ಪಂಧಿಸವಂತೆ ಮನವಿ ಮಾಡಿದರು. ಈ ವೇಳೆ ಪುಟ್ಟಣ್ಣಯ್ಯಗೆ ಶಾಸಕ ರಮೇಶ್ ಕುಮಾರ್ ಕೂಡ ಸಾಥ್ ನೀಡಿದರು. ಧರಣಿ ಕುಳಿತ ಪುಟ್ಟಣ್ಣಯ್ಯರಿಗೆ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಮಾತನಾಡಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸಮಾಧಾನಪಡಿಸಿದರು. 
 
ಬಳಿಕ ವಿಧಾನಸಭಾ ಉಪ ಸಭಾಧ್ಯಕ್ಷ ಎನ್.ಹೆಚ್.ಶಿವಶಂಕರ ರೆಡ್ಡಿ ಅವರು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ರೈತರ ಸಮಸ್ಯೆಯನ್ನು ಆಲಿಸುವಂತೆ ಸೂಚಿಸಿದರು. 

ವೆಬ್ದುನಿಯಾವನ್ನು ಓದಿ