ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಬಿಜೆಪಿ ನಾಯಕರೂ ಸೇರಿ 20 ಮಂದಿಗೆ ನೋಟಿಸ್

ಮಂಗಳವಾರ, 31 ಮಾರ್ಚ್ 2015 (12:42 IST)
1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಉತ್ತರ ನೀಡುವಂತೆ ಬಿಜೆಪಿಯ ಹಿರಿಯ ನಾಯಕರಿಗೂ ಸೇರಿದಂತೆ 20 ಮಂದಿಗೆ ಸುಪ್ರೀಂ ಕೋರ್ಟ್ ಇಂದು ನೋಟಿಸ್ ಜಾರಿಗೊಳಿಸಿದೆ. 
 
ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೊಳಪಟ್ಟಿದ್ದು, ಪ್ರಕರಣದಲ್ಲಿ ಪಿತೂರಿ ನಡೆಸಿದ್ದರು ಎಂಬ ಆರೋಪ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಉಮಾಭಾರತಿ, ಮುರಳಿ ಮನೋಹರ್ ಜೋಷಿ, ಉತ್ತಪ ಪ್ರದೇಶ ರಾಜ್ಯದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್  ಸೇರಿದಂತೆ ಒಟ್ಟು 20 ಮಂದಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಇದರ ಜೊತೆಗೆ ಸಿಬಿಐಗೂ ಕೂಡ ನೋಟಿಸ್ ನೀಡಿರುವ ನ್ಯಾಯಾಲಯ, ನಾಲ್ಕು ವಾರಗಳ ಒಳಗೆ ಉತ್ತರಿಸುವಂತೆ ಸೂಚಿಸಿದೆ. 
 
ಈ ಪ್ರಕರಣದ ವಿಚಾರಣೆಯನ್ನು ಈಗಾಗಲೇ ಅಲಹಾಬಾದ್ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಸಲಾಗಿತ್ತು. ಆದರೆ ಮುಸ್ಲಿಂ ಸಮುದಾಯದವರು ಸುಪ್ರೀಂ ಮೆಟ್ಟಿಲೇರಿ ಮೇಲ್ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದೆ.  
 
ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ನಾಯಕರ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಕೋಬ್ರಾ ಪೋಸ್ಟ್ ಎಂಬ ಸಂಸ್ಥೆ, ರಹಸ್ಯ ಕಾರ್ಯಾಚರಣೆ ನಡೆಸಿ 2014ರಲ್ಲಿ ಸಿಡಿಯೊಂದನ್ನು ಬಿಡುಗಡೆ ಮಾಡಿತ್ತು. 
 
ಅದರಲ್ಲಿ ವ್ಯವಸ್ಥಿತ ಸಂಚು ರೂಪಿಸಿ ಮಸೀದಿಯನ್ನು ಧ್ವಂಸ ಮಾಡಲಾಗಿದ್ದು, ಮಸೀದಿ ಧ್ವಂಸದ ಕಾರ್ಯಾಚರಣೆಗೆ ಆರ್‌ಎಸ್‌ಎಸ್‌ ಸಂಘಟಕರು 'ಆಪರೇಷನ್ ಜನ್ಮಭೂಮಿ' ಎಂದು ಹೆಸರಿಟ್ಟಿದ್ದರು.  ಇದಲ್ಲದೆ ಮಸೀದಿಯ ಧ್ವಂಸಕ್ಕಾಗಿ ಎರಡು ತಿಂಗಳ ಮೊದಲೇ ಆರ್‌ಎಸ್‌ಎಸ್ ನಾಯಕರು ತಮ್ಮ ಸಂಘ ಪರಿವಾರದ ಸ್ವಯಂ ಸೇವಕರಿಗೆ ತರಬೇತಿ ನೀಡಿದ್ದರು ಎಂಬ ಸಂಗತಿ ಬಯಲಾಗಿತ್ತು. 
 
23 ಜನರ ವಿರುದ್ಧ ನಡೆಸಿದ್ದ ರಹಸ್ಯ ಕಾರ್ಯಾಚರಣೆ ಇದಾಗಿದ್ದು, ಇದರಲ್ಲಿ ಅಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್, ಅಡ್ವಾಣಿ, ಕಲ್ಯಾಣ್ ಸಿಂಗ್ ಸೇರಿದಂತೆ ಇತರರಿಗೆ ಮಸೀದಿ ಧ್ವಂಸಕ್ಕೂ ಮೊದಲೇ ಧ್ವಂಸದ ಬಗ್ಗೆ ಮಾಹಿತಿ ಇತ್ತು ಎಂಬ ಅಂಶ ಬಯಲಾಗಿತ್ತು. 

ವೆಬ್ದುನಿಯಾವನ್ನು ಓದಿ