ಮುಂಜಾನೆ 6 ರಿಂದ 10 ಗಂಟೆಯವರೆಗೆ ಯಾವ ಖಾಸಗಿ ಸುದ್ದಿ ವಾಹಿನಿಗಳನ್ನು ನೋಡಿದರೂ ಕಂಡುಬರುವುದು ಭವಿಷ್ಯ, ಜ್ಯೋತಿಷ್ಯದ ಕುರಿತ ಕಾರ್ಯಕ್ರಮಗಳೇ. ಇಂತಹ ಕಾರ್ಯಕ್ರಮಗಳು ವಾಹಿನಿಗಳ ಟಿ.ಆರ್.ಪಿಯನ್ನು ಹೆಚ್ಚಿಸಿರುವುದು ಸಹ ಸುಳ್ಳಲ್ಲ. ಪ್ರತಿಯೊಂದಕ್ಕೂ ಜ್ಯೋತಿಷ್ಯದ ಥಳಕು ಹಾಕಿ ಬೆದರಿಕೆ ಸೃಷ್ಟಿಸುವ ಜ್ಯೋತಿಷಿಗಳ ಮಾತಿಗೆ ವೀಕ್ಷಕರ ಜೇಬು ಖಾಲಿಯಾಗುತ್ತಿದೆ. ಜ್ಯೋತಿಷ್ಯಿಗಳ ಜೇಬು ಮಾತ್ರ ಭರ್ಜರಿಯಾಗಿಯೇ ತುಂಬಿಕೊಳ್ಳುತ್ತಿದೆ.
ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಈ ಜ್ಯೋತಿಷ್ಯಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಯಾವ ಹಂತಕ್ಕೆ ಬೇಕಾದರೂ ಇಳಿಯಬಲ್ಲರು.ಇದಕ್ಕೆ ಸಾಕ್ಷಿ ಎಂಬಂತೆ ಕರ್ನಾಟಕದ ಜನಪ್ರಿಯ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಸ್ವ ಘೋಷಿತ ಜ್ಯೋತಿಷಿ ಒಬ್ಬರು ಅತ್ಯಾಚಾರಕ್ಕೆ ಸಿಲುಕುವ ಸಾಧ್ಯತೆಗಳ ಬಗ್ಗೆ ವಿಲಕ್ಷಣ ಮುನ್ನೋಟಗಳನ್ನು ನೀಡಿದ್ದಾರೆ.
ಗ್ರಹಗಳ ಚಲನೆ ಅತ್ಯಾಚಾರಕ್ಕೆ ಕಾರಣವಾಗುತ್ತದೆ ಎಂದು ವಾದಿಸುವ ಸತ್ಚಿದಾನಂದ ಬಾಬು ಗುರೂಜಿ ಯಾವ ರೀತಿಯ ಮಹಿಳೆಯರು ಅತ್ಯಾಚಾರಕ್ಕೆ ತುತ್ತಾಗಲಿದ್ದಾರೆ, ಯಾವ ರಾಶಿಯ ಮಕ್ಕಳು ಈ ಕೀಚಕ ಕೃತ್ಯಕ್ಕೆ ಬಲಿಪಶುಗಳಾಗಿದ್ದಾರೆ ಎಂದು ಹೇಳುವುದರ ಮೂಲಕ ಭಯವನ್ನು ಹುಟ್ಟು ಹಾಕುತ್ತಿದ್ದಾರೆ.
ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ಬಂದ ವರದಿಯ ಪ್ರಕಾರ ಜ್ಯೋತಿಷಿ ಅವರ ಭವಿಷ್ಯವಾಣಿ ಈ ರೀತಿ ಮುಂದುವರೆಯುತ್ತದೆ ಕುಂಭ ರಾಶಿಯ ಮಹಿಳೆಯರು ಮದುವೆಯಾದ 3 ರಿಂದ 6 ತಿಂಗಳ ಅವಧಿಯಲ್ಲಿ ಅತ್ಯಾಚಾರಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಿವೆ ಮತ್ತು ಅತ್ಯಾಚಾರಿಯ ಮನೆ ಒಳಗೆ ಇದು ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಅತ್ಯಾಚಾರದಿಂದ ಪಾರಾಗಲು ಕೆಲವು ಪರಿಹಾರಗಳನ್ನು ಸಹ ಅವರು ಕೊಡುತ್ತಾರೆ. ಅದಕ್ಕಾಗಿ ಈ ಮಂತ್ರವನ್ನು ಜಪಿಸುವಂತೆ ಅವರು ಕರೆ ನೀಡಿದ್ದಾರೆ. "ಓಂ ಕ್ರೀಮ್ ಕ್ರೀಮ್ ಕ್ರೀಮ್ ಕಾಲಿಕೆ ಕ್ಲೀಮ್ ಕ್ಲೀಮ್ ಸರ್ವ ಶತ್ರು ನಾಮ ಪ್ರಹಾರ ಭಂಜನ ಮಾರಯಾ ವಿಸ್ಪೋತಯಾ ಕ್ಲೀಮ್ ಕ್ಲೀಮ್ ಕ್ಲೀಮ್, ಕ್ರೀಮ್ ಕ್ರೀಮ್ ಕ್ರೀಮ್ ಪಟ್".
ಅವರ ಪ್ರಕಾರ ಈ ಮಂತ್ರ ಪಠಿಸಿದಲ್ಲಿ ಅತ್ಯಾಚಾರಿ ಸ್ಥಳದಿಂದ ಓಡಿ ಹೋಗುವಂತೆ ಮಾಡುವುದಂತೆ.
ಜ್ಯೋತಿಷ್ಯಿಗಳ ಈ ವಿಲಕ್ಷಣ ಭವಿಷ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವೃ ವಿರೋಧ ವ್ಯಕ್ತವಾಗಿದೆ.