ಸರ್ಕಾರವನ್ನು ಕಾನೂನಿನಿಂದ ನಡೆಸಬಾರದು ಎಂದು ಮೋದಿ ಪ್ರತಿಪಾದಿಸಿದರು. ಇಂದಿರಾಗಾಂಧಿ ಕಾಲದಲ್ಲಿ ಬ್ಯಾಂಕುಗಳು ರಾಷ್ಟ್ರೀಕರಣವಾಯಿತು. ಆದರೆ ಬಡವರಿಗೆ ಯಾವುದೇ ಅನುಕೂಲವಾಗಲಿಲ್ಲ. ಬ್ಯಾಂಕುಗಳು ಕೇವಲ ಶ್ರೀಮಂತರಿಗಷ್ಟೇ ಸೀಮಿತವಾಗಿದೆ. ಹಲವು ವರ್ಷಗಳಿಂದ ಬ್ಯಾಂಕುಗಳು ಬಡವರ ಉಪಯೋಗಕ್ಕೆ ಬಂದಿರಲಿಲ್ಲ. ನಮ್ಮ ಜನ್ದನ್ ಯೋಜನೆ ಬಡವರಿಗೆ ತಲುಪಿದೆ. ಎಲ್ಲ ಬಡವರಿಗೂ ಬ್ಯಾಂಕ್ ಖಾತೆ ಒದಗಿಸುವ ಯೋಜನೆ ಚಾಲನೆಗೆ ಬಂದಿದೆ. ಬಡವರಿಗೆ ಒಂದು ಲಕ್ಷ ರೂ. ಆರೋಗ್ಯವಿಮೆ ಯೋಜನೆ ಕಲ್ಪಿಸಿದ್ದೇವೆ ಎಂದು ಮೋದಿ ಜನ್ದನ್ ಯೋಜನೆಯಿಂದ ಬಡವರಿಗಾಗುವ ಉಪಯೋಗವನ್ನು ಬಿಚ್ಚಿಟ್ಟರು.
ಡಿಗ್ರಿ ಇದ್ದರೆ ಸಾಲದು, ಕೌಶಲ್ಯ ಅಭಿವೃದ್ಧಿ ಅಗತ್ಯ ಎಂದು ಮೋದಿ ಹೇಳಿದರು. ಅದಕ್ಕಾಗಿ ಕೌಶಲ್ಯ ಅಭಿವೃದ್ಧಿ ಸಚಿವಾಲಯವನ್ನು ಆರಂಭಿಸಿದೆವು ಎಂದು ಹೇಳಿದರು. ಗಾಂಧಿ ಗುಲಾಮಗಿರಿಯಿಂದ ದೇಶವನ್ನು ಮುಕ್ತಗೊಳಿಸಿದರು. ನಾವು ಕೊಳಕಿನಿಂದ ದೇಶವನ್ನು ಮುಕ್ತಗೊಳಿಸಬೇಕು. ಅ. 2ರಂದು ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡುವುದಾಗಿ ಮೋದಿ ಹೇಳಿದರು. ಮೋದಿ ಭಾಷಣದುದ್ದಕ್ಕೂ ಜನರು ಹರ್ಷೋದ್ಗಾರದಿಂದ ಸ್ವಾಗತಿಸಿದರು.