ಬಿಬಿಎಂಪಿ ಚುನಾವಣೆ: ಜೆಡಿಎಸ್ ಮಹಿಳಾ ಅಭ್ಯರ್ಥಿ ಪತಿಗೆ ರಾಡ್‌ನಿಂದ ಥಳಿತ

ಗುರುವಾರ, 20 ಆಗಸ್ಟ್ 2015 (12:40 IST)
ಬಿಬಿಎಂಪಿ ಚುನಾವಣಾ ಮತದಾನಕ್ಕೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಸ್ಪರ್ಧಿಗಳ ನಡುವೆ ಜಿದ್ದಾ ಜಿದ್ದಿ ಏರ್ಪಟ್ಟಿದ್ದು, ನಿನ್ನೆ ರಾತ್ರಿ ಒಂದು ಗಂಟೆ ಸುಮಾರಿನಲ್ಲಿ ನಗರದ ಪೀಣ್ಯ ಕೈಗಾರಿಕಾ ಪ್ರದೇಶದ ವಾರ್ಡ್‌ನ ಜೆಡಿಎಸ್ ಸದಸ್ಯೆ ಲತಾ ರಮೇಶ್ ಅವರ ಪತಿ ಮೇಲೆ ದುಷ್ಕರ್ಮಿಗಳು ರಾಡ್‌ನಿಂದ ಮನಬಂದಂತೆ ಥಳಿಸಿ ಪರಾರಿಯಾಗಿರುವ ಘಟನೆ ರಾಜೇಶ್ವರಿನಗರದಲ್ಲಿ ನಡೆದಿದೆ.   
 
ದುಷ್ಕರ್ಮಿಗಳ ಥಳಿತಕ್ಕೊಳಗಾದವರು ಜೆಡಿಎಸ್ ಅಭ್ಯರ್ಥಿ ಲತಾ ಅವರ ಪತಿ ರಮೇಶ್ ಎಂದು ಹೇಳಲಾಗಿದ್ದು, ಕಾರ್ಯ ನಿಮಿತ್ತ ಹೊರಗೆ ತೆರಳಿದ್ದ ವೇಳೆಯಲ್ಲಿ ಸುತ್ತುವರಿದ ದುಷ್ಕರ್ಮಿಗಳ ತಂಡವೊಂದು ರಾಡ್‌ನಿಂದ ಹಲ್ಲೆ ನಡೆಸಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ರಮೇಶ್ ತೀವ್ರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಲಗ್ಗೇರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 
 
ಇನ್ನು ಮಾಧ್ಯಮಗಳೊಂದಿಗೆ ಮಾತನಾಡಿದ ಲತಾ, ನನ್ನ ಪತಿ ರಮೇಶ್ ಅವರನ್ನು ನಿನ್ನೆ ರಾತ್ರಿ ನಗರದ ಕೆಲ ಮಂದಿ ಗೂಂಡಾಗಳು ರಾಡ್‌ನಿಂದ ಥಳಿಸಿದ್ದಾರೆ. ಇದಕ್ಕೆ ಕಾರಣ ನಾನು ಚುನಾವಣೆಗೆ ಸ್ಪರ್ಧಿಸಿರುವುದೇ ಆಗಿದ್ದು, ಚುನಾವಣೆಯಲ್ಲಿ ಸೋಲುತ್ತೇನೆ ಎಂಬ ಭಯದಿಂದ ನನ್ನ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ತಮ್ಮ ಬೆಂಬಲಿಗರೊಂದಿಗೆ ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. 
 
ಈ ಸಂಬಂಧ ಅಭ್ಯರ್ಥಿ ಲತಾ ರಮೇಶ್ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಆರೋಪಿಸಿ ನಗರದ ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ