ಬಿಬಿಎಂಪಿ: ಚುನಾವಣೆಗೂ ಮುನ್ನವೇ ಅಭ್ಯರ್ಥಿಗಳಿಗೆ ಪ್ರಮಾಣವಚನ ಬೋಧಿಸಲಿರುವ ಜೆಡಿಎಸ್

ಬುಧವಾರ, 5 ಆಗಸ್ಟ್ 2015 (11:19 IST)
ಬಿಬಿಎಂಪಿ ಚುನಾವಣೆಯ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಪ್ರಚಾರ ಹಾಗೂ ಸಿದ್ಧತೆಯ ಕಾವೇರಿದ್ದು, ಇದಕ್ಕೆ ಜೆಡಿಎಸ್ ಕೂಡ ಹೊರತಾಗಿಲ್ಲ. 
 
ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ನೂತನ ತಂತ್ರವನ್ನು ಕೈಗೊಂಡಿದ್ದು, ಚುನಾವಣಾ ಅಖಾಡಕ್ಕಿಳಿಯುವ ಮುನ್ನ ತಮ್ಮ ಅಭ್ಯರ್ಥಿಗಳಿಂದ ಸಾರ್ವಜನಿಕವಾಗಿ ಪ್ರಮಾಣವಚನ ಸ್ವೀಕರಿಸಿ, ಮುಚ್ಛಳಿಕೆ ಬರೆಸಿಕೊಳ್ಳುವ ನೀತನ ತಂತ್ರವನ್ನು ಕೈಗೆತ್ತಿಕೊಂಡಿದೆ.   
 
ಹೌದು, ನಾನು ಒಂದು ವೇಳೆ ಬಿಬಿಎಂಪಿ ಸದಸ್ಯನಾಗಿ ಆಯ್ಕೆಯಾದಲ್ಲಿ ಯಾವುದೇ ರೀತಿಯಾಗಿ ಸಾರ್ವಜನಿಕರಿಗೆ ಅಥವಾ ಸಾರ್ವಜನಿಕ ಆಸ್ತಿಗೆ ಧಕ್ಕೆ ತರುವುದಿಲ್ಲ. ಅಲ್ಲದೆ ಸಾರ್ವಜನಿಕರ ಸಮಸ್ಯೆಗಳಿಗೆ ಸದಾ ಸ್ಪಂಧಿಸುತ್ತೇನೆ. ಯಾವುದೇ ಭ್ರಷ್ಟಾಚಾರದಲ್ಲಿಯೂ ಪಾಲ್ಗೊಳ್ಳುವುದಿಲ್ಲ ಎಂದು ಪ್ರಮಾಣವಚನ ಸ್ವೀಕರಿಸಿ ಮುಚ್ಚಳಿಕೆ ಬರೆದುಕೊಡಲಿದ್ದಾರೆ. ಆ ಬಳಿಕವಷ್ಟೇ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. 
 
ಇನ್ನು ಈ ಸಂಬಂಧ ಸ್ವತಃ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರೇ ಪ್ರತಿಕ್ರಿಯಿಸಿದ್ದು, ಇತ್ತೀಚೆಗೆ ಎಲ್ಲಾ ಜನಪ್ರತಿನಿಧಿಗಳೂ ಕೂಡ ಸುಳ್ಳು ಭರವಸೆಗಳನ್ನು ನೀಜುವ ಮೂಲಕ ಸಾರ್ವಜನಿಕರಿಗೆ ಅನ್ಯಾಯ ಎಸಗುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರಿಗೆ ಜನಪ್ರತಿನಿಧಿಗಳ ಮೇಲೆ ಅಪನಂಬಿಕೆ ಮೂಡಿದೆ. ಈ ಹಿನ್ನೆಲೆಯಲ್ಲಿ ಇಂತಹ ನೂತನ ಕ್ರಮಕ್ಕೆ ಮುಂದಾಗಿದ್ದು, ಆಗಸ್ಟ್ 6ರಂದು ನಗರದ ನ್ಯಾಷನಲ್ ಮೈದಾನದಲ್ಲಿ ಪಕ್ಷದ ಬೃಹತ್ ಸಮಾವೇಶ ನಡೆಸುತ್ತಿದ್ದು, ಅಂದು ಬಿಬಿಎಂಪಿಯ 198 ಮಂದಿ ಅಭ್ಯರ್ಥಿಗಳೂ ಕೂಡ ಮುಚ್ಚಳಿಕೆ ಬರೆದುಕೊಟ್ಟು, ಪ್ರಮಾಣವಚನವನ್ನೂ ಸ್ವೀಕರಿಸಲಿದ್ದಾರೆ. ಆ ಬಳಿಕ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದರು. 

ವೆಬ್ದುನಿಯಾವನ್ನು ಓದಿ