ಬಿಬಿಎಂಪಿ ಲಾರಿ ಗುದ್ದಿ ವ್ಯಕ್ತಿ ಸಾವು: ಚಾಲಕ ಪರಾರಿ

ಸೋಮವಾರ, 5 ಅಕ್ಟೋಬರ್ 2015 (11:45 IST)
ಬಿಬಿಎಂಪಿಯ ಕಸದ ಲಾರಿಯೊಂದು ಸಾರ್ವಜನಿಕ ವ್ಯಕ್ತಿಯೋರ್ವರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದ ಬಳಿ ನಿನ್ನೆ ಸಂಜೆ ನಡೆದಿದೆ.  
 
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಮೃತ್ಯುಂಜಯ(55) ಎಂದು ಹೇಳಲಾಗಿದ್ದು, ತಾಲೂಕಿನ ದ್ಯಾವಸಂದ್ರ ನಿವಾಸಿ ಎಂದು ತಿಳಿದು ಬಂದಿದೆ. 
 
ಇನ್ನು ನಿನ್ನೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 207ರಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದ್ದು, ಅಪಘಾತದ ಬಳಿಕ ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಬಳಿಕ ಮೃತ ದೇಹವನ್ನು ಸ್ಥಳೀಯರ ನೆರವಿನಿಂದ ದೊಡ್ಡಬಳ್ಳಾಪುರ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.  
 
ಅಪಘಾತಕ್ಕೀಡಾದ ಲಾರಿಯು ಕಸವನ್ನು ತುಂಬಿಕೊಂಡು ಇಲ್ಲಿನ ಗುಂಡ್ಲಹಳ್ಳಿ ಟೆರ್ರಾಫಾರ್ಮ್‌ಗೆ ತೆರಳುತ್ತಿತ್ತು ಎಂದು ಹೇಳಲಾಗಿದ್ದು, ಮೃತರ ಕುಟುಂಬಕ್ಕೆ ಪರಿಹಾರ ದೊರಕಿಸುವ ಹಾಗೂ ಕಸವನ್ನು ಗುಂಡ್ಲಹಳ್ಳಿಯಿಂದ ಇತರೆಡೆಗೆ ವರ್ಗಾಯಿಸುವವರೆಗೆ ಲಾರಿಯನ್ನು ಎತ್ತಲು ಬಿಡುವುದಿಲ್ಲ ಎಂಬುದಾಗಿ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. 
 
ಈ ಪ್ರಕರಣ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ